Monday, December 31, 2012

ಕುವೆಂಪು ಕಾವ್ಯಯಾನ ಮತ್ತು ಅಜ್ಞಾತ ಮಹಾಪುರುಷ ಅಲಿಗೆ ಪುಟ್ಟಯ್ಯನಾಯಕ ಪುಸ್ತಕಗಳ ಬಿಡುಗಡೆ ಸಮಾರಂಭ - ಕುಪ್ಪಳಿ 29.12.12

ಪ್ರಾರ್ಥನೆ - ಶ್ರೀ ಕಾ.ಹಿ. ರಾಧಾಕೃಷ್ಣ

ಬಿಡುಗಡೆ

ಪರಿಚಯ - ಡಾ. ಚಂದ್ರಶೇಖರ ನಂಗಲಿ


ಅಲಿಗೆ ಪುಟ್ಟಯ್ಯನಾಯಕರ ನೆನಪು


ಧನ್ಯತೆ - ಸತ್ಯನಾರಾಯಣ

ಅಭಿನಂದನೆ - ಶ್ರೀ ವಿ.ಎಂ. ಕುಮಾರಸ್ವಾಮಿ

ನೆನಪು - ಶ್ರೀ ಅಮ್ಮಡಿ ನಾಗಪ್ಪನಾಯಕ


ಅಧ್ಯಕ್ಷಭಾಷಣ - ಚಂದ್ರಶೇಖರ ಕಂಬಾರ





Friday, December 28, 2012

ಕಾವ್ಯಯಾನಕ್ಕೆ ಬೆನ್ನು ತಟ್ಟಿದ ಹಂಪನಾ


ಅಪರೂಪದ ಕವಿತೆಗಳ ವಿಶ್ಲೇಷಣೆ
ಡಾ.ಬಿ.ಆರ್.ಸತ್ಯನಾರಾಯಣರ ಈ ಕೃತಿ ಕುವೆಂಪು ಕಾವ್ಯಯಾನ ತನ್ನ ಶೀರ್ಷಿಕೆಯನ್ನು ಸಾರ್ಥಕ ಪಡಿಸಿದೆ. ಈ ಪುಸ್ತಕದಲ್ಲಿರುವ ಬಿಡಿ ಬಿಡಿ ಬರೆಹಗಳನ್ನು ಒಂದೊಂದಾಗಿ ಓದುತ್ತ ಹೊರಟರೆ, ಒಟ್ಟು ಪುಸ್ತಕದ ಓದು ಮುಗಿಯುವ ಹೊತ್ತಿಗೆ ಕುವೆಂಪುರವರ ಕಾವ್ಯಪ್ರಪಂಚವನ್ನು ಹೊಕ್ಕು ಹೊರಬಂದ ಅನುಭವ ಆಗುತ್ತದೆ.
ಕುವೆಂಪುರವರು ಬರೆದಿರುವ ಆತ್ಮಕಥೆಯ ಬೃಹದ್‌ಗ್ರಂಥದ ಹೆಸರು ನೆನಪಿನ ದೋಣಿಯಲ್ಲಿ ಎಂದು. ತಮ್ಮ ಬದುಕಿನ ಚಿತ್ರಣವನ್ನು ನೆನಪಿನ ದೋಣಿಯಲ್ಲಿ ಪಯಣಿಸುತ್ತ ಕಟ್ಟಿಕೊಟ್ಟಿದ್ದಾರೆ. ಬಿ.ಆರ್.ಸತ್ಯನಾರಾಯಣರು ಈ ಪುಸ್ತಕದಲ್ಲಿ ಕುವೆಂಪುರವರ ಕವಿತೆಗಳನ್ನೇ ಬಳಸಿಕೊಂಡು ಒಂದು ಕಾವ್ಯ ಪ್ರಯಾಣ(ಯಾನ) ಮಾಡಿದ್ದಾರೆ. ಇದರಿಂದ ಓದುಗರಿಗೆ ಏಕಕಾಲಕ್ಕೆ ಎರಡು ಪ್ರಯೋಜನಗಳು ದಕ್ಕಿವೆ. ಒಂದು, ಕುವೆಂಪುರವರ ಕವಿತೆಗಳ ಪರಿಚಯ; ಎರಡು, ಕುವೆಂಪುರವರ ಜೀವನ ಮತ್ತು ಮನೋಧರ್ಮದ ಪರಿಚಯ.

ಸತ್ಯನಾರಾಯಣರು ಆರಿಸಿಕೊಂಡಿರುವ ಕವಿತೆಗಳ ಸ್ವಾರಸ್ಯ ಹೃದ್ಯವಾಗಿದೆ. ಜತೆಗೆ ಅವರು ವಾಡಿಕೆಯಾಗಿರುವ ಮಾಮೂಲು ಕವಿತೆಗಳನ್ನು ಉದಾಹರಿಸುವುದಲ್ಲದೆ ಅಷ್ಟಾಗಿ ಪ್ರಚಲಿತವಾಗಿರದ ಅಪರೂಪದ ಅಪ್ರಕಟಿತ ಕವಿತೆಗಳನ್ನು ವಿಶ್ಲೇಷಿಸಿರುವುದು ಶ್ಲಾಘನೀಯ. ಇದಲ್ಲದೆ ಆಯ್ದುಕೊಂಡಿರುವ ಕವಿತೆಗಳು ಮೈಪಡೆದ ಸಮಯ, ಸ್ಥಳ ಸಂದರ್ಭ ಮತ್ತು ಔಚಿತ್ಯ ಕುರಿತು ಮಾಹಿತಿಯನ್ನು ಒದಗಿಸಿ ಉಪಕರಿಸಿದ್ದಾರೆ. ಕುವೆಂಪುರವರ ಬಾಳಿನ ಕೆಲವು ಅಪೂರ್ವ ಹಾಗೂ ಮಹತ್ವದ ರಸಗಳಿಗೆಯನ್ನು ಗುರುತಿಸಿರುವುದು ಈ ಕಾವ್ಯಯಾನದ ಮತ್ತೊಂದು ಹೆಚ್ಚುಗಾರಿಕೆ. ಸತ್ಯನಾರಾಯಣರು ತಮ್ಮ ಈ ಗ್ರಂಥ ಸಾಮಾನ್ಯ ಓದುಗರನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿತವಾಗಿದೆಯೆಂದು ವಿನಯಪೂರ್ವಕ ವಿಜ್ಞಾಪಿಸಿದ್ದಾರೆ. ಆದರೆ ಇಲ್ಲಿನ ಬರವಣಿಗೆಯ ಹಾಸು ಇನ್ನೂ ಮಿಗಿಲಾಗಿದ್ದು ಪ್ರೌಢರಿಗೂ ಪ್ರಿಯವಾಗುತ್ತದೆ.

ಕುವೆಂಪು ಸಮಗ್ರ ಕನ್ನಡ ಸಾಹಿತ್ಯದಲ್ಲಿ ಶಿಖರಸೂರ್ಯ. ಸಾಹಿತ್ಯದ ವಿಭಿನ್ನ ಪ್ರಕಾರಗಳಲ್ಲಿ ಅವರ ಕೊಡುಗೆ ಗಣ್ಯವಾದದ್ದು. ಭಾವಗೀತೆಗಳಿಂದ ಹಿಡಿದು ಶಿಶುಸಾಹಿತ್ಯದಿಂದ ತೊಡಗಿ, ಕಾವ್ಯ, ನಾಟಕ, ವಿಮರ್ಶೆ, ಕಾದಂಬರಿ, ಮಹಾಕಾವ್ಯದವರೆಗೆ ಅದರ ವ್ಯಾಪ್ತಿಯಿದೆ. ಸಾಹಿತ್ಯೇತರ ಕಾರಣಗಳಿಗಾಗಿಯೂ ಕುವೆಂಪು ಮಹತ್ವದವರು. ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಅವರ ಛಾಪು ಗಾಢತರವಾಗಿದೆ. ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ದೃಷ್ಟಿಯನ್ನು ಬಿತ್ತಿದ ಏಕಮೇವಾದ್ವಿತೀಯರು ಕುವೆಂಪು. ಮಹಾಕವಿಯಾಗಿ ದಾರ್ಶನಿಕರಾಗಿ ಸಾಂಸ್ಕೃತಿಕ ನಾಯಕರಾಗಿ ಕುವೆಂಪುರವರು ವರ್ತಮಾನಕ್ಕೆ ಹೇಗೆ ಪ್ರಸ್ತುತರಾಗಿದ್ದಾರೆ ಎಂಬುದನ್ನು ಅವರ ಕಾವ್ಯದಿಂದ ಆಯ್ದ ಭಾಗಗಳಿಂದ ಡಾ. ಬಿ.ಆರ್. ಸತ್ಯನಾರಾಯಣ ಸಮರ್ಥವಾಗಿ ಸ್ಥಾಪಿಸಿ ಅಭಿನಂದನಾರ್ಹರಾಗಿದ್ದಾರೆ.
೧೦.೦೯.೨೦೧೨
ನಾಡೋಜ ಪ್ರೊ. ಹಂಪ. ನಾಗರಾಜಯ್ಯ

Thursday, December 27, 2012

ಕುವೆಂಪು ಕಾವ್ಯಯಾನಕ್ಕೊಂದು ಆರಂಭ

ನನ್ನ ಮಾತು
ಇಲ್ಲಿನ ಬರಹಗಳು ಕುವೆಂಪು ಕಾವ್ಯದ ವಿಮರ್ಶೆಯಲ್ಲ; ಕೇವಲ ಮರು ಓದು ಎಂಬುದನ್ನು ಮೊದಲೇ ಸ್ಪಷ್ಟಪಡಿಸುತ್ತೇನೆ. ಏಕೆಂದರೆ ನಾನು ವಿಮರ್ಶಕನಲ್ಲ; ಕೇವಲ ಒಬ್ಬ ಓದುಗ ಮಾತ್ರ. ಕುವೆಂಪು ಕಾವ್ಯ-ಬದುಕು ಸಾಮಾನ್ಯ ಓದುಗನಾದ ನನ್ನನ್ನು ಅಚ್ಚರಿಯ ಕಡಲಲ್ಲಿ ಮುಳುಗಿಸಿಬಿಟ್ಟಿವೆ. ಒಬ್ಬ ಓದುಗನಾಗಿ, ಕೆಲವು ಕವನಗಳ ಸಾಂದರ್ಭಿಕ ಹಿನ್ನೆಲೆಯಲ್ಲಿ ನಡೆಸಿದ ಕಾವ್ಯಯಾತ್ರೆಯ ಫಲವೇ ಈ ಬರಹಗಳು. 

ಕವನಗಳ ಹುಟ್ಟಿನ ಸಂದರ್ಭದ ಹಿನ್ನೆಲೆಯಲ್ಲಿ ಅವುಗಳನ್ನು ನೋಡುವುದು, ಆ ಕವಿತೆಗಳಿಗೆ ಮತ್ತೊಂದು ಆಯಾಮವನ್ನು ತಂದುಕೊಡುತ್ತದೆ ಎಂಬ ನಂಬಿಕೆ ನನ್ನದು. ಕುವೆಂಪು ಅವರ ಬದುಕು-ಬರಹವನ್ನು ಗ್ರಹಿಸುವಲ್ಲಿ ಇದೊಂದು ಹೊಸ ಆಯಾಮವಷ್ಟೆ! ಖಂಡ ಖಂಡವಾಗಿ ಅಖಂಡವನ್ನು ಗ್ರಹಿಸುವ ಹಾಗೆ. ಕವಿತೆಗಳ ಸಂದರ್ಭವನ್ನು ಹುಡುಕಿಕೊಂಡು ಹೊರಟ ನನಗೆ ಸಿಕ್ಕಿದ್ದು ಪ್ರಕೃತಿಯ ಶಿಶು, ಗುರುವಿನೊಲುಮೆಯ ಶಿಷ್ಯ, ಶಿಷ್ಯರೊಲುಮೆಯ ಗುರು, ಪೂರ್ಣಾಂಗಿಗೊಲಿದ ಪತಿ, ಮಕ್ಕಳ ವಾತ್ಸಲ್ಯಮಯೀ ತಂದೆ, ಪೂರ್ಣಾನಂದದ ಅನುಭಾವಿ, ಕಲ್ಮಶವಿಲ್ಲದ ಚಿಂತಕ, ಗದ್ದಲವಿಲ್ಲದ ಕ್ರಾಂತಿಕಾರ, ಅದ್ಭುತಗಳನ್ನು ಸಾಧಿಸಿದ ದಾರ್ಶನಿಕ ಕುವೆಂಪು!
 
ಕೇವಲ ಕುವೆಂಪು ಕಾವ್ಯಗಳನ್ನು ಓದುವುದು ಮತ್ತು ಆಸಕ್ತ ಓದುಗರಿಗೆ ಓದಿಸುವುದು ಇಲ್ಲಿನ ಬರಹಗಳ ಏಕಮಾತ್ರ ಉದ್ದೇಶ.  ನಿಮ್ಮ ಲೇಖನವನ್ನು ಓದಿದಾಗ, ಕವಿತೆಯ ಪೂರ್ಣಪಾಠವನ್ನು ಓದಬೇಕೆನ್ನಿಸಿದರೂ, ಕಾರ್ಯದೊತ್ತಡದಿಂದ ಓದಲಾಗುತ್ತಿಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದರು. ಅದಕ್ಕಾಗಿ ಸಾಧ್ಯವಾದಷ್ಟು ಕಡೆ, ಕವಿತೆಗಳ ಪೂರ್ಣಪಾಠ ಉಲ್ಲೇಖಿಸಿದ್ದೇನೆ. ಬ್ಲಾಗಿನಲ್ಲಿ ಬರೆಯುವಾಗ ಭಾಗಶಃ ಉಲ್ಲೇಖಗೊಳ್ಳುತ್ತಿದ್ದ ಕವಿತೆಗಳನ್ನು  ಅಲ್ಲಲ್ಲಿಯೇ ಪೂರ್ತಿಯಾಗಿ ಓದಲು ಅನುವಾಗವಂತೆ ಪೂರ್ಣಪಾಠ ನೀಡಬೇಕಂತಲೂ ಹಲವಾರು ಸ್ನೇಹಿತರು ಒತ್ತಾಯಿಸಿದ್ದೂ ಅದಕ್ಕೆ ಕಾರಣ. ಇಲ್ಲಿಯ ಬರಹಗಳಲ್ಲಿ, ಅವುಗಳ ಸಂಯೋಜನೆಯಲ್ಲಿ ಏನಾದರೂ ಅಸಂಬದ್ಧತೆ ಕಂಡು ಬಂದರೆ, ಅದಕ್ಕೆ ನಾನೇ ಪೂರ್ಣ ಹೊಣೆಗಾರನಾಗಿರುತ್ತೇನಯೇ ಹೊರತು, ಕವಿಯ ಕಾವ್ಯವಲ್ಲ.
ನನ್ನ ನಂದೊಂದ್ಮಾತು ಬ್ಲಾಗಿನಲ್ಲಿ ಕುವೆಂಪು ಕಾವ್ಯದ ಬಗ್ಗೆ ನಾನು ಬರೆದ ಲೇಖನಗಳನ್ನು ಓದಿ ಪ್ರೋತ್ಸಾಹಿಸಿದ, ಪ್ರತಿಕ್ರಿಯೆ ನೀಡಿದ, ಪ್ರೀತಿಯಿಂದ ಜಗಳಕ್ಕೆ ಬಿದ್ದ ಆತ್ಮೀಯರಿಗೆ,
ನಾಲ್ಕೈದು ಕಂತುಗಳಲ್ಲಿ ಮುಗಿಸಬೇಕೆಂದಿದ್ದ ಬರವಣಿಗೆಯನ್ನು, ದಯಮಾಡಿ ಕುವೆಂಪು ಅವರ ಕಾವ್ಯದ ಬಗೆಗಿನ ಬರವಣಿಗೆಯನ್ನು ಮುಂದುವರೆಸಿ, ನಮ್ಮ ಕೆಲಸದ ನಡುವೆ ಆ ಮಹಾಕವಿಯನ್ನು ಪೂರ್ತಿ ಓದಲಾಗದಿದ್ದರೂ, ನಿಮ್ಮ ಬರಹಗಳ ಮೂಲಕ ಸ್ವಲ್ಪವಾದರೂ ಓದಿಕೊಳ್ಳುತ್ತೇವೆ ಎಂದು ಪ್ರೀತಿಯಿಂದ ಒತ್ತಾಯಿಸಿದ ನನ್ನ ಬ್ಲಾಗ್ ಸ್ನೇಹಿತರಿಗೆ, ಅನಿವಾಸಿ ಭಾರತೀಯರಿಗೆ,
ಬ್ಲಾಗಿನಲ್ಲಿ ಪ್ರಕಟವಾಗುವಾಗಲೇ ಕೆಲವೊಂದನ್ನು ಬ್ಲಾಗಿನಿಂದೆತ್ತಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ಸಂಪಾದಕರುಗಳಿಗೆ, ಸಂಪದ, ಅವಧಿ, ದಟ್ಸ್‌ಕನ್ನಡ ಮತ್ತು ಕೆಂಡಸಂಪಿಗೆ ಮೊದಲಾದ ಆನ್‌ಲೈನ್ ಪತ್ರಿಕೆಗಳವರಿಗೆ,
ಕುವೆಂಪು ಕವಿತೆಗಳ ಬರವಣಿಗೆಯ ಬಗ್ಗೆ ತಿಳಿಸಿದಾಗ, ಪ್ರೋತ್ಸಾಹದ ಮಾತನಾಡಿದ ಶ್ರೀಮತಿ ತಾರಿಣಿಯವರಿಗೆ ಮತ್ತು ಶ್ರೀಮತಿ ರಾಜೇಶ್ವರಿಯವರಿಗೆ, 
ಆಗೊಮ್ಮೆ ಈಗೊಮ್ಮೆ ನಾನು ಕೊಟ್ಟ ಈ ಸರಣಿಯ ಲೇಖನಗಳನ್ನು ಓದಿ ಪ್ರತಿಕ್ರಿಯಿಸಿದ, ಪ್ರೋತ್ಸಾಹಿಸಿದ ಹಿರಿಯ ಮಿತ್ರರಾದ ಶ್ರೀ ಜಿ.ಎಸ್.ಎಸ್.ರಾವ್, ಶ್ರೀ ಎಸ್.ಎಂ.ಪೆಜತ್ತಾಯ ಹಾಗೂ ಶ್ರೀ ಎಂ.ವಿ.ಕುಮಾರಸ್ವಾಮಿಯವರಿಗೆ,  ಮತ್ತು ನಮ್ಮ ಮನೆಯವರಿಗೆ,
ತಮ್ಮ ಕಾರ್ಯಬಾಹುಳ್ಯದ ನಡುವೆಯೂ, ಈ ಕಿರಿಯನ ಪ್ರಾರ್ಥನೆಗೆ ಓಗೊಟ್ಟು, ಕೃತಿಗೆ ಮುನ್ನುಡಿಯನ್ನು ಬರೆದು ಆಶೀರ್ವದಿಸಿರುವ ಹಿರಿಯ ಸಂಶೋಧಕರಾದ ನಾಡೋಜ ಪ್ರೊ. ಹಂಪ. ನಾಗರಾಜಯ್ಯನವರಿಗೆ,
ಈಗ, ಲೇಖನಗಳನ್ನು ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವ ಮಿತ್ರ ಸೃಷ್ಟಿ ನಾಗೇಶನಿಗೆ, ಮುಖಪುಟ ಕಲಾವಿದರಾದ ಸುಧಾಕರ ದರ್ಭೆ ಮತ್ತು ಸತ್ಯಶ್ರೀ ಪ್ರಿಂಟರ‍್ಸ್ ಎಲ್.ಲಿಂಗಪ್ಪನವರಿಗೆ,
ಮತ್ತು ಸಹೃದಯ ಓದುಗರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.