Showing posts with label T20 ತೇಜಸ್ವಿ ಟ್ವೆಂಟಿ. Show all posts
Showing posts with label T20 ತೇಜಸ್ವಿ ಟ್ವೆಂಟಿ. Show all posts

Monday, February 08, 2010

T20 = ತೇಜಸ್ವಿ ಟ್ವೆಂಟಿ : ಸ್ವರೂಪ ಪಂಚಿಂಗ್ ಲೈನ್ಸ್

T20 = ತೇಜಸ್ವಿ ಟ್ವೆಂಟಿ! ಮಾಲಿಕೆಯಲ್ಲಿ ಈ ಬಾರಿ ಅವರ ‘ಸ್ವರೂಪ’ ಕಿರುಕಾದಂಬರಿಯ ಪಂಚಿಂಗ್ ಲೈನ್‌ಗಳನ್ನು ಆರಿಸಿದ್ದೇನೆ.
ಈಗಾಗಲೇ ‘ಸ್ವರೂಪ’ವನ್ನು ಓದದವರಿಗೆ ಈ ಸಾಲುಗಳನ್ನು ಓದಿ ಮೂಲಕೃತಿಯನ್ನು ಓದಬೇಕು ಎನ್ನಿಸಿದರೆ ನಾನು ಧನ್ಯ. ಈಗಾಗಲೇ ‘ಸ್ವರೂಪ’ವನ್ನು ಓದಿದವರೂ ಮತ್ತೊಮ್ಮೆ ಓದುವಂತಾದರೆ ಡಬಲ್ ಖುಷಿ ನನ್ನದು.
ಪುನರಾವರ್ತನೆಯಾದರೂ ಓದುಗರಲ್ಲಿ ಈ ವಿನಂತಿಯನ್ನು ನಾನು ಮಾಡಿಕೊಳ್ಳಲೇ ಬೇಕಾಗಿದೆ. ಇಲ್ಲಿನ ಎಲ್ಲಾ ವಾಕ್ಯಗಳನ್ನು ಮೂಲಕೃತಿಯಿಂದ ಬೇರ್ಪಡಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ಕೆಲವೊಂದು ವಾಕ್ಯಗಳನ್ನು ಪ್ರತ್ಯೇಕವಾಗಿ ಅರ್ಥೈಸಿಕೊಂಡಾಗ ‘ಇದೇನು ಹೀಗೆ?’ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆಗ ನಮಗೆ ತೋಚಿದ ಸಮಾಧಾನವನ್ನು ನಾವು ಆರೋಪಿಸಿಕೊಂಡು ಇನ್ನಷ್ಟು ಅನರ್ಥ ಮಾಡಿಕೊಳ್ಳುತ್ತೇವೆ. ಆದ್ದರಿಂದ, ಅಂತಹ ಸಂದಿಗ್ಧತೆ ತಲೆದೋರಿದಲ್ಲಿ, ಮೂಲಕೃತಿಯನ್ನು ಓದಿ ಅದರ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕು.

1. ಈ ಕೋರ್ಟುಕಚೇರಿಗಳಿಗೆ ತಿರುಗಾಡಿ ನೂರೆಂಟು ಕೇಸುಗಳನ್ನು ಮಾಡಿಕೊಳ್ಳುವ ಹೇಸಿಗೆ ಲೆಕ್ಕಾಚಾರ ಯಾರಿಗೆ ಬೇಕು?
2. ಆರ್ಥಿಕದಾಸ್ಯದಲ್ಲಿ ಆತ್ಮಸ್ವಾತಂತ್ರ್ಯದ ಸಿದ್ದಿ ಸಾಧ್ಯವೇ ಇಲ್ಲ. ದುಡ್ಡು, ದುಡ್ಡಿನಿಂದ ಬರುವ ಅಧಿಕಾರ, ಅದು ಬೇಕೆನಿಸಿದಾಗ ಕೊಡುವ ಸುಖ ಸಂತೋಷ ಇವನ್ನೆಲ್ಲಾ ತ್ಯಾಜ್ಯ ಎಂದು ನೀನು ಹೇಳಿದರೆ ನಿನ್ನನ್ನ ಪಂಚೇಂದ್ರಿಯಗಳಲ್ಲೇ ಏನೋ ಒಂದು ಊನವಿರಬೇಕು.
3. ಸೋಷಲಿಸಂ, ಶೋಷಣೆ ಎನ್ನುವ ಮೂರಕ್ಷರದ ಪದ ಹಣ ಕಂಡೊಡನೆ ದಿಗಿಲು ಬೀಳುವಂತೆ ಮಾಡುತ್ತದೆ. ಪ್ರತಿ ನೂರು ರೂಪಾಯಿ ನೋಟಿನ ಹಿಂದೂ ಒಂದು ಅಮಾನುಷ ಹೇಯತೆಯನ್ನು ಗುಮಾನಿಸುತ್ತದೆ.
4. ಸೋಷಲಿಸಂಮ್ಮಿಗೆ ಸಿಕ್ಕುವುದು ದುಡಿಸಿ ಉತ್ಪಾದನೆ ಮಾಡಿದವನ ಶೋಷಣೆ. ಇನ್ನೊಂದು ಅನ್ಯತರದ್ದು ಅದರ ಹಿಡಿತಕ್ಕೆ ಸಿಗುವುದಿಲ್ಲ.
5. ಶೋಷಣೆ ಒಂದಲ್ಲ ಒಂದು ರೀತಿಯಲ್ಲಿ ಅನಿವಾರ‍್ಯ. ಇಲ್ಲ ಉತ್ಪಾದಿಸಲು ಶೋಷಿಸಬೇಕು. ಇಲ್ಲ ಹಾಳುಮಾಡಲು ಶೋಷಿಸಬೇಕು.
6. ದುಷ್ಟದೇವತೆ ಆಗಿದ್ದರೆ ಅದು ಸದಾ ರಕ್ತಮಾಂಸಾದಿ ಹೊಲಸಿಗೆ ಹಂಬಲಿಸುವಂಥದಾದರೆ ನಿನ್ನ ಉಗುಳಿನಿಂದ ಮೈಲಿಗೆ ಆಗುತ್ತದೆ ಎನ್ನುವುದು ಸುಳ್ಳು. ಅದು ಒಳ್ಳೆಯ ದೇವತೆ ಆಗಿದ್ದರೆ ಕೇವಲ ಉಗಿದ ಮಾತ್ರಕ್ಕೆ ಕೋಪಿಸಿಕೊಳ್ಳಬೇಕೇಕೆ?
7. ಅವರ ನಂಬಿಕೆ ಬಟ್ಟೆಯ ಒಳಗೆ ಅಂತರಾಳದಲ್ಲಿ, ಕುಳಿತಾಗ ಎದ್ದಾಗ ಕೊರೆಯುವ ದಾರದ ನೋವನ್ನು ಸಹಿಸುವ ನಿಷ್ಠೆಯಾದಾಗ ಅದನ್ನು ಹೇಗೆ ಲೇವಡಿ ಮಾಡಲಿ?
8. ಇಬ್ಬರಲ್ಲೊಬ್ಬರು ಎಲ್ಲಾದರೂ ಒಂದು ಕಡೆ ಒಬ್ಬರ ಪ್ರಾಮಾಣಿಕತೆಯನ್ನು ನಂಬಬೇಕು.
9. ನನ್ನ ತಪೋಭಂಗಕ್ಕೆ ಮೇನಕೆಯೇ ಬೇಕೆಂದಿಲ್ಲ. ಅತಿ ಕುದ್ರವಾದುದೊಂದು ಹಲ್ಲಿ ಬಾಲವಲ್ಲಾಡಿಸಿದರೆ ಸಾಕು. ಹಲ್ಲಿ ಬಾಲ ಅಲ್ಲಾಡಿಸಿದ್ದೂ ಮೇನಕೆ ಮೊಲೆ ಅಲ್ಲಾಡಿಸಿ ಕುಣಿದದ್ದು ಬಿ.ಎ., ಎಂ.ಎ.ಗಳಂಥ ಒಂದಕ್ಕಿಂತ ಇನ್ನೊಂದು ಹೆಚ್ಚಿನ ಯೋಗ್ಯತೆ ಪಡೆದ ಪರೀಕ್ಷೆಗಳೆಂದು ಹೇಗೆ ಹೇಳೋಣ.
10. ನನ್ನಂಥವರು ಇನ್ನೊಂದಿಷ್ಟು ಜನ ಇದ್ದರೆ ಈ ಕರ್ನಾಟಕದಲ್ಲಿ ಮರ‍್ಯಾದಸ್ತರೇ ಉಳಿಯುವುದಿಲ್ಲ.
11. ಕನ್ನಡದ ಸಾಹಿತಿಯಾಗಬೇಕಾದವನು ಮೊದಲು ಬ್ರಾಹ್ಮಣದ್ವೇಷಿಯಾಗಬೇಕಾಗುವುದು ಅನಿವಾರ‍್ಯ ಹಾಗೂ ಅದು ನ್ಯಾಯ.
12. ಬುದ್ಧಿ ಎಂದರೆ ತಿಳುವಳಿಕೆ ಎಂದರೆ ಇನ್ನೇನು! ಹಳೆಯ ಘಟನೆಗಳ ಹಿನ್ನೆಲೆಯಲ್ಲಿ ವರ್ತಮಾನವನ್ನು ಕುರಿತು ಆಲೋಚಿಸುವುದು ತಾನೆ!
13. ಬದುಕು ಎಂದರೆ ನನಗೆ ಅನಂತವೂ ಬುದ್ಧಿಯುತವೂ ಆದ ತಂತ್ರ, ರಾಜತಂತ್ರ.
14. ಸ್ತಬ್ಧ ಮೌನದಲ್ಲಿ ದೂರದ ಸಾವಿನಲ್ಲಿ ಹೆಜ್ಜೆ ಸಪ್ಪಳ ಕೇಳುತ್ತದೆ - ಯೌವ್ವನ ಅಲೆ ಎದ್ದ ಕೊಳದಂತೆ.
15. ಕೇವಲ ಅಭಿವ್ಯಕ್ತಿ ಮಾಧ್ಯಮದ ದೆಸೆಯಿಂದ ನನ್ನ ಮಹತ್ವದ ಅರ್ಥವೆಲ್ಲಾ ನನ್ನೊಳಗೇ ಉಳಿದುಕೊಂಡಿದೆ ಎಂದು ನನ್ನ ನಂಬಿಕೆ.
16. ಶಿಕಾರಿ ಎಂದರೆ ಉವಿನ ಅಳಿವಿನ ಹೋರಾಟ.
17. ಶಿಕಾರಿ ಒಂದು ಅನಂತವಾದ ಜೂಜು.
18. ಶಿಕಾರಿ ಒಂದು ವ್ಯಸನ. ಅದೊಂದು ಆಲೋಚನೆಗೆ ಹತ್ತುವ ಚಟ. ಆದರೆ ಶಿಕಾರಿಯನ್ನು ಕಂಡರೆ ನನಗೆ ಇಷ್ಟ. ಏಕೆಂದು ನನಗೆ ಸರಿಯಾಗಿ ಗೊತ್ತಿಲ್ಲ. ಮಾಂಸದಾಸೆಗಂತೂ ಅಲ್ಲ.
19. ಅವಿವಾಹಿತರಾಗಿ ಒಟ್ಟಿಗೆ ಮಲಗುವುದು ಅಧಾರ್ಮಿಕ ಎಂದಲ್ಲ. ಎಲ್ಲಿ ಗರ್ಭಿಣಿಯಾಗಿಬಿಡುತ್ತಾಳೋ ಎಂಬ ಭಯದಿಂದ.
20. ಸೃಷ್ಟಿಯ ಬಗ್ಗೆ, ಜೀವನದ ಬಗ್ಗೆ, ಆಲೋಚಿಸಿದಂತೆಲ್ಲಾ ನನ್ನ ಬಗ್ಗೆಯೇ ನನಗೆ ಒಂದು ತಿಳಿವು ಮೂಡತೊಡಗಿತು.

Tuesday, January 19, 2010

ಪುಸ್ತಕ ಪ್ರಕಟಣೆ, ಸಾಹಿತ್ಯ ಸೇವೆ ಎಂಬ ಕಾಳದಂಧೆ

ಕನ್ನಡ ಪುಸ್ತಕೋದ್ಯಮದ ದುಸ್ಥಿತಿಗೆ ತೇಜಸ್ವಿ ಬರಹಗಾರರು, ಪ್ರಕಾಶಕರು ಮತ್ತು ಸರ್ಕಾರವನ್ನು ನೇರ ಹೊಣೆಗಾರರನ್ನಾಗಿಸುತ್ತಾರೆ. ಮೊದಲಿಗೆ ತೇಜಸ್ವಿ ಗುರುತಿಸುವಂತೆ, ಬರಹಗಾರರ ಹೊಣೆಗೇಡಿತನವನ್ನು ನೋಡೋಣ. ಪ್ರಸ್ತುತ ಕನ್ನಡದಲ್ಲಿ ಬರದೇ ಬದುಕು ಸಾಗಿಸಬೇಕಾದ ವೃತ್ತಿ ಬರಹಗಾರರು ಇಲ್ಲ ಎಂಬುದು ತೇಜಸ್ವಿಯವರ ಮೊದಲ ಆಕ್ಷೇಪ. ಇರುವವರೆಲ್ಲಾ ಪಾರ್ಟ್‌ಟೈಮ್ ಬರಹಗಾರರೆಂದೇ ಹೇಳಬಹುದು. ಬರೆಯುವುದು ಒಂದು ತರ ಶೋಕಿಯಾಗುತ್ತಿದೆ. ಬರೆದುದ್ದು ಪುಸ್ತಕ ರೂಪದಲ್ಲಿ ಬಂದರೆ ಸಾಕು. ಸಾಹಿತಿ ಎಂಬ ಲೇಬಲ್ ಅಂಟಿಸಿಕೊಂಡುಬಿಡುತ್ತಾರೆ. ತಾವು ಬರೆದುದ್ದನ್ನು ಬೇರೆಯವರು ಓದುತ್ತಿದ್ದಾರೊ ಇಲ್ಲವೋ ಎಂಬುದರ ಬಗ್ಗೆ ಇವರಿಗೆ ಪ್ರಾಥಮಿಕ ಜ್ಞಾನವೂ ಇಲ್ಲ. ತಮ್ಮ ಪುಸ್ತಕದ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆಯೂ ಯೋಚಿಸುವ ವ್ಯವಧಾನವೂ ಇಲ್ಲ. ಇಂದು ಕನ್ನಡದಲ್ಲಿ ಒಂದೂ ಪೈಸೆ ಗೌರವಧನ ಪಡೆಯದೆ ತಮ್ಮ ಪುಸ್ತಕಗಳು ಪ್ರಕಟವಾದರೆ ಸಾಕು ಎಂದು ಪ್ರಕಾಶಕರಿಗೆ ಕೊಟ್ಟು ಬಿಡುವ ಲೇಖಕರ ಸಂಖ್ಯೆಯೇ ಶೇಕಡಾ ಎಂಬತ್ತನ್ನು ಮೀರಬಹುದು. ಇದರಲ್ಲಿ ಹೆಚ್ಚಿನವರು ಸಾಹಿತ್ಯ ಕ್ಷೇತ್ರಕ್ಕೆ ಹೊಸಬರಿರುತ್ತಾರೆ. ಪ್ರಕಟವಾದ ಪುಸ್ತಕದ ಒಂದಷ್ಟು ಕಾಪಿಗಳನ್ನು ಪಡೆದುಕೊಂಡು, ಪತ್ರಿಕೆಗಳಿಗೆ, ಸ್ನೇಹಿತರಿಗೆ ಹಂಚಿ ಉಳಿದಿದ್ದನ್ನು ಅಟ್ಟಕ್ಕೆ ಸಾಗಿಸಿ ಸುಮ್ಮನಾಗಿಸಿಬಿಡುತ್ತಾರೆ. ಇನ್ನು ಇಂತಹವರ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರೂ ಅಷ್ಟೆ. ಸರ್ಕಾರಿ ಗ್ರಂಥಾಲಯಗಳಿಗೆ ಒಂದಷ್ಟು ಪ್ರತಿಗಳನ್ನು ಮಾರಿ ಹಾಕಿದ ಬಂಡವಾಳ ಹಿಂತೆಗೆದುಕೊಂಡು ಸುಮ್ಮನಾಗಿಬಿಡುತ್ತಾರೆ.

ಮೊದಲ ಬಗೆಯ ಬರಹಗಾರರಲ್ಲದೆ ಉಳಿದ ಶೇಕಡಾ ಇಪ್ಪತ್ತು ಬರಹಗಾರರೂ ಸಿರಿಯಸ್ಸಾಗೇನೂ ಬರವಣಿಗೆಯನ್ನು ತಗೆದುಕೊಂಡವರಲ್ಲ. ತಾವು ಆಗಾಗ ಪತ್ರಿಕೆಗಳಿಗೆ ಬರೆದ ಲೇಖನಗಳನ್ನು, ಮಂಡಿಸಿದ ಪ್ರಬಂದಗಳನ್ನು, ಕೊನೆಗೆ ಎಲ್ಲೋ ಮಾಡಿದ ಭಾಷಣಗಳನ್ನು ಬರಹ ರೂಪಕ್ಕೆ ತಂದು ಪುಸ್ತಕ ಪ್ರಕಟಣೆಗೆ ಕೊಟ್ಟುಬಿಡುತ್ತಾರೆ. ಇವರೆಲ್ಲರೂ ಸ್ವಲ್ಪ ಸಾಹಿತ್ಯ ಕ್ಷೇತ್ರದಲ್ಲಿ ಸ್ವಲ್ಪಮಟ್ಟಿನ ಹೆಸರು ಮಾಡಿದಂತವರು. ಆದರೆ ಇವರೂ ತಮ್ಮ ಪುಸ್ತಕದ ಮಾರುಕಟ್ಟೆಯ ಬಗ್ಗೆ ಯಾವುದೇ ಫೀಡ್‌ಬ್ಯಾಕ್ ಹಾಗೂ ಓದುಗರ ಅಭಿರುಚಿಯ ಬಗ್ಗೆ ತಿಳಿಯುವ ಗೋಜಿಗೆ ಹೋಗುವುದಿಲ್ಲ. ನಿಜವಾಗಿ ಸಾಹಿತ್ಯವನ್ನು ಸೀರಿಯಸ್ಶಾಗಿ ತೆಗೆದುಕೊಂಡು ತಾವು ಬರೆದುದ್ದು ಮಾರಾಟವಾಗುತ್ತಿದೆಯೇ ಇಲ್ಲವೇ ಎಂಬುದನ್ನು ಮನಗಂಡು, ಓದುಗರ ಪ್ರತಿಕ್ರಿಯೆಗಳನ್ನು ಗಮನಿಸಿ ಮುಂದಡಿಯಿಡುವ ಕನ್ನಡ ಬರಹಗಾರರ ಸಂಖ್ಯೆ ಬೆರಳೆಣಿಕೆಯಷ್ಟಿಲ್ಲ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ.

ಇನ್ನು ಪ್ರಕಾಶಕರು. ಇವರಿಂದಲೇ ಇಡೀ ಪುಸ್ತಕೋದ್ಯಮ ಈ ಮಟ್ಟಿನ ದುಸ್ಥಿತಿಗೆ ಇಳಿದಿದೆ ಎಂಬುದು ತೇಜಸ್ವಿಯವರ ಎರಡನೇ ಆಕ್ಷೇಪಣೆ. ಪಠ್ಯಪುಸ್ತಕಗಳನ್ನು ಮಾತ್ರ ಪ್ರಕಟಿಸುವ ಪ್ರಕಾಶಕರು ಶಿಕ್ಷಣ ಕ್ಷೇತ್ರದ, ತನ್ಮೂಲಕ ಇಡೀ ದೇಶದ ಸಂಸ್ಕೃತಿಯ ದುಸ್ಥಿತಿಗೆ ಕಾರಣರಾಗಿದ್ದಾರೆ. ಇದರಲ್ಲಿ ಬರಹಗಾರರ ಪಾಲೂ ಇದೆ. ಕೇವಲ ಪಠ್ಯಪುಸ್ತಕಗಳನ್ನೇ ಬರೆಯುವ ವೃತ್ತಿಬರಹಗಾರರು ಅಲ್ಲಲ್ಲಿ ಸಿಗುತ್ತಾರೆ. ಹೆಸರನ್ನು ಹಾಕಿಕೊಳ್ಳದೇ ಕನ್ನಡ ಪಠ್ಯಪುಸ್ತಕಗಳಿಗೆ ಗೈಡ್ ಬರೆಯುವ ಅಧ್ಯಾಪಕರೂ ನಮ್ಮ ನಡುವೆ ಇದ್ದಾರೆ. ಕನ್ನಡವನ್ನು ಮಾತೃಭಾಷೆಯನ್ನಾಗಿ ಉಳ್ಳ ಒಬ್ಬ ವಿದ್ಯಾರ್ಥಿ, ಕನ್ನಡ ಪಠ್ಯವನ್ನು ಗೈಡ್ ಮುಖಾಂತರ ಓದುವ ದುಸ್ಥಿತಿಯೇ ಭಯಂಕರವಾದದ್ದು. ಇನ್ನು ಕೆಲವರು ಸರಸ್ವತಿಯ ಸೇವೆ ಎಂದೋ ಕನ್ನಡದ ಸೇವೆ ಎಂದೋ ಪುಸ್ತಕಗಳನ್ನು ಪ್ರಕಟಿಸುವವರು. ಇವರು ಪುಸ್ತಕೋದ್ಯಮಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಇರುವವರು. ಇವರಿಂದಲೂ ಬರಹಗಾರರಿಗೆ ಯಾವುದೇ ರೀತಿಯ ಫೀಡ್‌ಬ್ಯಾಕ್ ಸಿಗುವುದಿಲ್ಲ.

ರಾಜ್ಯ ಹಾಗೂ ಕೇಂದ್ರಸರ್ಕಾರದ ಯಾವ ಯಾವ ಸ್ಕೀಮ್‌ಗಳಲ್ಲಿ ಎಷ್ಟೆಷ್ಟು ಹಣವಿದೆ ಎಂಬುದನ್ನು ತಿಳಿದು ಆ ಸ್ಕೀಮಿಗೆ ಬೇಕಾದಂತಹ ಪುಸ್ತಕಗಳನ್ನು ಮುದ್ರಿಸುವ ಒಂದು ಪ್ರಕಾಶಕ ವರ್ಗವಿದೆ. ಇವರು ಕೆಲವೇ ದಿನಗಳಲ್ಲಿ, ಬೇಡಿಕೆಯಿರುವ ಎಲ್ಲಾ ವಿಷಯಗಳ ಪುಸ್ತಕಗಳನ್ನು ಬರೆಯಿಸಿ ಮುದ್ರಿಸಿ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಾರೆ. ಆಯಾಯ ಸ್ಕೀಮಿನ ಸರ್ಕಾರಿ ಅಧಿಕಾರಿಗೆ ಇದರಲ್ಲಿ ಸಿಂಹಪಾಲು ಲಾಭವಿದೆ. ಆದರೆ ಬರಹಗಾರನಿಗೂ ಓದುಗನಿಗೂ ಯಾವುದೇ ಲಾಭವಿಲ್ಲ.

ಇನ್ನು ಕೊನೆಯವರು ಕೇವಲ ಗ್ರಂಥಾಲಯಕ್ಕೆ ಸರ್ಕಾರ ಕೊಂಡುಕೊಳ್ಳುವ ಸೀಮಿತ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಪುಸ್ತಕ ಪ್ರಕಟಿಸಿ ಲಾಭ ಮಾಡುವವರು. ಇವರು ಸರ್ಕಾರ ಕೊಂಡುಕೊಳ್ಳುವ ನೂರೋ ಇನ್ನೂರೋ ಪ್ರತಿಗಳಲ್ಲೇ ತಾವು ಹಾಕಿದ ಬಂಡವಾಳವನ್ನು ವಾಪಸ್ ಪಡೆಯಬಲ್ಲ ಚಾಣಕ್ಯರು. ಇಲ್ಲೂ ಲೇಖಕರಿಗೆ ಗೌರವಪ್ರತಿಗಳೇ ಗತಿ. ಇಂತಹ ಪ್ರಕಾಶಕರಿಂದ ಸಂಭಾವನೆ ಪಡೆಯುವ ಲೇಖಕರ ಸಂಖ್ಯೆ ಶೇಕಡಾ ಐದೋ ಹತ್ತೋ ಇರಬಹುದು ಅಷ್ಟೆ. ಆದರೆ ಗ್ರಂಥಾಲಯಗಳಲ್ಲಿ ಮಾತ್ರ ಕಸದ ರಾಶಿಯಂತೆ ಪುಸ್ತಕಗಳನ್ನು ತುಂಬಿಕೊಳ್ಳುತ್ತಾರೆ. ಇದರಲ್ಲಿ ಪುಸ್ತಕ ಆಯ್ಕೆ ಸಮಿತಿಯವರು, ಗ್ರಂಥಾಲಯ ಅಧಿಕಾರಿಗಳು, ಗ್ರಂಥಪಾಲಕರು ಪಾಲು ಪಡೆಯುತ್ತಾರೆ. ಐದು ವರ್ಷ ಗ್ರಂಥಾಲಯಗಳಿಗೆ ಯಾವುದೇ ಪುಸ್ತಕ ಖರೀದಿಸದಿದ್ದರೆ, ಈ ಬಗೆಯ ಪ್ರಕಾಶಕರಲ್ಲೆ ಶೇಕಡಾ ತೊಂಬತ್ತಕ್ಕೂ ಹೆಚ್ಚುಜನ ತಮ್ಮ ಉದ್ಯೋಗ ಬದಲಾಯಿಸಬೇಕಾಗುತ್ತದೆ ಇಲ್ಲ ಬಿಡಬೇಕಾಗುತ್ತದೆ. ನಿಜವಾಗಿ ಕನ್ನಡ ಪುಸ್ತಕೋದ್ಯಮದಲ್ಲಿ, ಗುಣಾತ್ಮಕ ಪುಸ್ತಕಗಳನ್ನು ಪ್ರಕಟಿಸುತ್ತಾ ಮಾರುಕಟ್ಟೆಯನ್ನು ಬೆಳೆಸುತ್ತಾ ಬಂದಿರುವ ಪ್ರಕಾಶಕ ಸಂಸ್ಥೆಗಳ ಸಂಖ್ಯೆ ಹತ್ತನ್ನು ದಾಟುವುದಿಲ್ಲ.

ಇಂದು ಸರ್ಕಾರ ಎಲ್ಲವಕ್ಕೂ ಅನುಧಾನ ಕೊಡುತ್ತಾ ಎಲ್ಲವನ್ನೂ ಹಾಳು ಮಾಡುತ್ತಿದೆ. ಚಲನಚಿತ್ರೋದ್ಯಮಕ್ಕೆ, ಪುಸ್ತಕೋದ್ಯಮಕ್ಕೆ, ಕನ್ನಡದ ಅಕಾಡೆಮಿಗಳಿಗೆ, ಪ್ರಾಧಿಕಾರಗಳಿಗೆ, ಕೆಲವು ನಾಟಕ ಕಂಪೆನಿಗಳಿಗೆ ಎಲ್ಲವಕ್ಕೂ ಸರ್ಕಾರದ ಅನುದಾನವೇ ಉಸಿರಾಗಿದೆ. ಇಂದೊಮ್ಮೆ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಸಭೆಯಲ್ಲಿ ಚಂದ್ರಹಾಸ ಗುಪ್ತ ಎಂಬ ಅಧಿಕಾರಿಯೊಬ್ಬರು ಆಗಿನ ಸಾಹಿತ್ಯ ಪರಿಷತ್ ಪದಾಧಿಕಾರಿಗಳಗೆ ಒಂದು ಪ್ರಶ್ನೆ ಕೇಳಿದ್ದು ನೆನಪಾಗುತ್ತಿದೆ. ‘ಒಂದು ಆಪ್‌ಸೆಟ್ ಮುದ್ರಣ ಯಂತ್ರವನ್ನು ಇಟ್ಟುಕೊಂಡಿರುವವನು ನಾಲ್ಕಾರು ಜನಕ್ಕೆ ಕೆಲಸಕೊಟ್ಟೂ ಸಂಬಳ ಕೊಟ್ಟೂ ತಾನೂ ಲಾಭ ಮಾಡುತ್ತಾ ಇರಬೇಕಾದರೆ ಪರಿಷತ್ ಮೂರು ಆಫ್‌ಸೆಟ್ ಮುದ್ರಣ ಯಂತ್ರಗಳನ್ನು ಇಟ್ಟುಕೊಂಡೂ, ಅವುಗಳ ರಿಪೇರಿಗೆಂದು ಅನುದಾನಕ್ಕಾಗಿ ಸರ್ಕಾರಕ್ಕೆ ಕೈ ಚಾಚುತ್ತಿರುವುದೇಕೆ? ಈ ರೀತಿ ಅನುದಾನದಿಂದಲೇ, ನಡೆಯುವ ಪುಸ್ತಕೋದ್ಯಮದ ಅಗತ್ಯವಾದರೂ ಏನು?’ ಎಂದು ಪ್ರಶ್ನಿಸಿದ್ದರು. ತೇಜಸ್ವಿ ಇದನ್ನೇ ಇನ್ನೂ ನಿಖರವಾಗಿ ಖಾರವಾಗಿ ಹೇಳುತ್ತಾರೆ. ‘ನನ್ನಮಟ್ಟಿಗಂತೂ ಆತ್ಮಗೌರವವನ್ನು ಬಿಟ್ಟುಕೊಟ್ಟು ಉಳಿಸಿಕೊಳ್ಳಬೇಕಾದ ಯಾವ ಕಲೆಯೂ ಪ್ರಪಂಚದಲ್ಲಿ ಇಲ್ಲ’ ಎಂದು. ತೇಜಸ್ವಿ ಈ ಮಾತನ್ನು ಹೇಳಿದ್ದು ರಂಗಾಯಣದ ಕಲಾವಿದರನ್ನು ಕುರಿತು. ಈ ಮಾತನ್ನು ಕೇಳಿದ ನಂತರ ರಂಗಾಯಣದ ಎಷ್ಟೋ ಜನ ಕಲಾವಿದರು ಹೊರಬಂದು ಸಿನಿಮಾ ಟೀವಿಗಳಲ್ಲಿ ತಮ್ಮ ಹೊಟ್ಟೆ ಪಾಡು ಕಂಡುಕೊಂಡರು. ಇದೇ ಮಾತು ಕೋಟಿಗಟ್ಟಲೆ ಅನುದಾನ ಪಡೆಯುತ್ತಿರುವ ಅಕಾಡೆಮಿಗಳು, ಪ್ರಾಧಿಕಾರಗಳು ವಿಶ್ವವಿದ್ಯಾಲಯಗಳಿಗೂ ಅನ್ವಯಿಸುತ್ತದೆ. ಗ್ರಂಥಾಲಯಗಳ ಪುಸ್ತಕ ಖರೀದಿ, ಅಕಾಡೆಮಿಗಳ ಕಾರ್ಯನಿರ್ವಹಣೆ, ಪುಸ್ತಕ ಪ್ರಾಧಿಕಾರದ ದುಂದುವೆಚ್ಚದ ಪ್ರಕಟಣೆಗಳು ಇವನ್ನು ನೋಡಿದಾಗ ಸಾರ್ವಜನಿಕರ ಹಣವನ್ನು ಕೆಲವೇ ಮಂದಿ ಸೇರಿಕೊಂಡು ಮಜಾ ಉಡಾಯಿಸುತ್ತಿದ್ದಾರೆ ಎಂಬ ಅನುಮಾನ ಬಾರದಿರದು.

ಅನುದಾನ ಎಂಬುದು ಯಾವುದೇ ಕಲೆಗೆ, ಸಂಸ್ಥೆಗೆ ತತ್ಕಾಲಿಕವಾಗಿ ಇರಬೇಕಾದ್ದು. ಅದೇ ನಿರಂತರವಾದರೆ ಅದರಿಂದ ನಡೆಯುವ ಸಂಸ್ಥೆಗಳು ಸ್ವಂತಿಕೆಯನ್ನು ಕಳೆದುಕೊಂಡು ಬರೇ ಲೆಕ್ಕ ಕೊಡುತ್ತಾ ಕೂರಬೇಕಾಗುತ್ತದೆ ಎನ್ನುತ್ತಾರೆ ತೇಜಸ್ವಿ. ಕಡೆಗೆ ತೇಜಸ್ವಿ ಸರ್ಕಾರಕ್ಕೆ ‘ನೀವು ಕೊಟ್ಟ ಅನುದಾನ ಏನಾಗತ್ತಿದೆ ಎಂಬುದನ್ನಾದರೂ ಸರಿಯಾಗಿ ಗಮನಿಸಿ ಲೆಕ್ಕ ಕೇಳಿ’ ಎಂದು ಸಲಹೆ ಕೊಟ್ಟಿದ್ದರು. ನನ್ನ ಸ್ವಂತ ಅನುಭವದಿಂದ ಹೇಳುವುದಾದರೆ ನಮ್ಮ ಗ್ರಂಥಾಲಯದಲ್ಲಿರುವ ಸುಮಾರು ಮೂರುಸಾವಿರ ಕನ್ನಡ ಪುಸ್ತಕಗಳಲ್ಲಿ ಮುಕ್ಕಾಲುಪಾಲು ಪುಸ್ತಕಗಳನ್ನು ಕೇಳುವವರೇ ಇಲ್ಲ. ನಮ್ಮ ಸಂಗ್ರಹದಲ್ಲಿ ಬಹುತೇಕ ಪ್ರಕಟಣೆಗಳು ವಿಶ್ವವಿದ್ಯಾಲಯಗಳು, ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ, ಸಾಹಿತ್ಯ ಪರಿಷತ್ತು ಪ್ರಕಟಿಸಿದಂತಹವುಗಳೇ ಆಗಿವೆ.

Tuesday, December 08, 2009

T20 = ತೇಜಸ್ವಿ ಟ್ವೆಂಟಿ : ಅಲೆಮಾರಿಯ ಅಂಡಮಾನ್

T20 = ತೇಜಸ್ವಿ ಟ್ವೆಂಟ ಮಾಲಿಕೆಯಲ್ಲಿ ಇದು ನನ್ನ ಎರಡನೆಯ ಪ್ರಯತ್ನ. ಈ ಮೊದಲಿಗೆ ಸಹಜಕೃಷಿ ಪುಸ್ತಕವನ್ನು ಈ ಪ್ರಯೋಗಕ್ಕೆ ಬಳಸಿಕೊಂಡಿದ್ದೆ. ಈಗ 'ಅಲೆಮಾರಿಯ ಅಂಡಮಾನ್' ಕಥೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. (ಈ ಕೃತಿಯಲ್ಲಿ ಅಲೆಮಾರಿಯ ಅಂಡಮಾನ್ ಬರಹವಲ್ಲದೆ, ಮಹಾನದಿ ನೈಲ್' ಎಂಬ ಬರಹವೂ ಸೇರಿದೆ. ಪ್ರಸ್ತುತ ನಾನು ಅಲಮೇರಿಯ ಅಂಡಮಾನ್ ಕಥೆಯನ್ನು ಮಾತ್ರ ಈ 20-20ಯಲ್ಲಿ ಬಳಸಿಕೊಂಡಿದ್ದೇನೆ.)
ಮತ್ತೊಮ್ಮೆ ಓದುಗರಲ್ಲಿ ನನ್ನದೊಂದು ವಿನಂತಿ. ಇಲ್ಲಿನ ವಾಕ್ಯಗಳನ್ನು ಮೂಲಕೃತಿಯಿಂದ ಬೇರ್ಪಡಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ಕೆಲವೊಂದು ವಾಕ್ಯಗಳನ್ನು ಪ್ರತ್ಯೇಕವಾಗಿ ಅರ್ಥೈಸಿಕೊಂಡಾಗ ‘ಇದೇನು ಹೀಗೆ?’ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆಗ ನಮಗೆ ತೋಚಿದ ಸಮಾಧಾನವನ್ನು ನಾವು ಆರೋಪಿಸಿಕೊಂಡು ಇನ್ನಷ್ಟು ಅನರ್ಥ ಮಾಡಿಕೊಳ್ಳುತ್ತೇವೆ. ಆದ್ದರಿಂದ, ಅಂತಹ ಸಂದಿಗ್ಧತೆ ತಲೆದೋರಿದಲ್ಲಿ, ಮೂಲಕೃತಿಯನ್ನು ಓದಿ ಅದರ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕು.
ಈಗಾಗಲೇ ಅಲೆಮಾರಿಯ ಅಂಡಮಾನ್ ಕಥೆಯನ್ನು ಓದದವರಿಗೆ ಈ ಸಾಲುಗಳನ್ನು ಓದಿ ಮೂಲಕೃತಿಯನ್ನು ಓದಬೇಕು ಎನ್ನಿಸಿದರೆ ನಾನು ಧನ್ಯ. ಈಗಾಗಲೇ ಅಲೆಮಾರಿಯ ಅಂಡಮಾನ್ ಕಥೆಯನ್ನು ಓದಿದವರೂ ಮತ್ತೊಮ್ಮೆ ಓದುವಂತಾದರೆ ಡಬಲ್ ಖುಷಿ ನನ್ನದು.
  ***
  1. ಯಾರಿಗೆ ತಾವಿರುವಲ್ಲೇ ಸಂತೋಷ ಉತ್ಸಾಹ ಕುತೂಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದೂ ವ್ಯರ್ಥ.
  2. ನನಗಂತೂ ಪುಣ್ಯಕ್ಷೇತ್ರಗಳಿಗೆ, ಪವಿತ್ರ ತೀರ್ಥಗಳಿಗೆ, ಚಾರಿತ್ರಿಕ ಸ್ಥಳಗಳಿಗೆ, ಪ್ರವಾಸಿಧಾಮಗಳಿಗೆ ಭೇಟಿಕೊಡುವ ಹಂಬಲವಂತೂ ಕೊಂಚವೂ ಇಲ್ಲ.
  3. (ಪುಣ್ಯಕ್ಷೇತ್ರಗಳ) ಅಲ್ಲಿನ ಅರ್ಚಕರ ದೇವಸ್ಥಾನದ ಏಜಂಟರುಗಳ, ವಸತಿಗೃಹಗಳ ಜನ ಕಾಟ ಗಲಭೆಗಳನ್ನು ಕಂಡು ಹೇಸಿಹೋಗಿದ್ದೇನೆ.
  4. ತಲೆ ಬೋಳಿಸಿಕೊಂಡು, ಕಿಟಕಿಗಳಿಗೆಲ್ಲಾ ತಮ್ಮ ಒದ್ದೆ ಬಟ್ಟೆಗಳನ್ನು ನೇತುಹಾಕಿಕೊಂಡು, ಬಸ್ಸಿನೊಳಗೆಲ್ಲಾ ವಾಂತಿಮಾಡಿಕೊಳ್ಳುತ್ತಾ ಸಾಗುವ ಈ ಪ್ರವಾಸಿಗಳ ಜೊತೆ ಕಣ್ಣು ಮೂಗು ಇರುವ ನರಮನುಷ್ಯ ಪ್ರವಾಸ ಹೋಗಲು ಸಾಧ್ಯವೇ?
  5. ಪಕ್ಕಾ ಐಹಿಕವಾದಿಗಳಾದ ಈ ಅರ್ಚಕರು, ಏಜಂಟುರುಗಳು ಇವರ ಸ್ಪೆಷಲ್ ಪೂಜೆ, ಸೂಪರ್ ಪೂಜೆಗಳಿಂದ ಇವರ ಹುಂಡಿಗಳಿಗೆ ಹಣ ಹಾಕುವುದರಿಂದ ಯಾರಿಗಾದರೂ ಪುಣ್ಯ ಪ್ರಾಪ್ತಿ ಸಾಧ್ಯವೇ?
  6. ಮಾನವ ಪ್ರತಿಯೊಬ್ಬನೂ ಕೊನೆಗೂ ಸಾವಿನಲ್ಲಿ ಏಕಾಂಗಿ ಎನ್ನುವ ಕಠೋರ ಸತ್ಯವನ್ನು ಮರೆಸಲು ಹಿಂದೂಧರ್ಮ ಈ ರೀತಿ ಗಲಾಟೆ ಗದ್ದಲ ದೊಂಬಿ ಮೈಕುಗಳ ಮರೆ ಹೊಕ್ಕಿದೆಯೆ ಎನ್ನುವ ಅನುಮಾನ ಬರುತ್ತದೆ.
  7. ಈಗಿನ ಅವತಾರಪುರುಷರು ಬಿಡಿ, ಹುಟ್ಟುವಾಗಲೇ ಹುಂಡಿ ಕಾಣಿಕೆ ಡಬ್ಬಿಗಳನ್ನು ಕೈಯಲ್ಲಿ ಹಿಡಿದುಕೊಂಡೇ ಹುಟ್ಟುತ್ತಾರೆ.
  8. ಈ ಪ್ರವಾಶಿಧಾಮಗಳ ಒಳಚರಂಡಿ ವ್ಯವಸ್ಥೆಗಳೆಲ್ಲಾ ನಿರೋಧ್‌ಗಳು ಸಿಕ್ಕಿಹಾಕಿಕೊಂಡು ನೀರು ಹೋಗದಂತೆ ಕೆಟ್ಟಿರುತ್ತವೆ.
  9. ಅವ್ಯವಹಾರಗಳ ಆಗರಗಳಾಗಿರುವ ಈ ವಿಹಾರಧಾಮಗಳಿಗೆ ಹೋಗಿ ನಮ್ಮನ್ನು ಅವರೂ ಅವರನ್ನು ನಾವೂ ಪರಸ್ಪರ ಶಂಕೆಯಿಂದ ನೋಡುವುದರ ಬದಲು ಅಲ್ಲಿಗೆ ಹೋಗದಿರುವುದೇ ಮೇಲಲ್ಲವೇ?
  10. ಈ ಪುಣ್ಯಕ್ಷೇತ್ರಗಳು ದೇವಸ್ಥಾನಗಳು ಯಾವುವೂ ಇಲ್ಲದ ಜಾಗ ಅಂಡಮಾನ್ ಆಗಿದ್ದರೆ ನನ್ನಂಥ ಅಲೆಮಾರಿಗೆ ಅದೇ ಸರಿ.
  11. ನಮ್ಮ ಕಲ್ಪನೆಯ ‘ನಮಗೂ’ ನಿಜವಾದ ನಮಗೂ ವ್ಯತ್ಯಾಸವಿರುವುದರಿಂದಲೇ ನಮ್ಮ ಫೋಟೋಗಳು ನಮ್ಮ ಸರಿಯಾದ ಪ್ರತಿಬಿಂಬವಾಗಿಲ್ಲವೆಂದು ಅದನ್ನು ದೂಷಿಸುತ್ತೇವೆ.
  12. ದರಿದ್ರ ದೇಶ! ನೋಡಿ ಹೇಗಿದೆ. ಆ ಬಡತನ! ಆ ರಾಜಕಾರಣಿಗಳೂ! ಆ ಭ್ರಷ್ಟಾಚಾರ! ಆ ಜನಸಂಖ್ಯೆ! ಆ ಪರಿಸರ ನಾಶ! ಸಾಕಪ್ಪಾ! ಈ ಶನಿಯನ್ನು ಬಿಟ್ಟು ದೂರ ಹೋಗುವುದಕ್ಕೆ ನನಗೇನೋ ಸಂತೋಷವೇ ಆಗುತ್ತಿದೆ.
  13. ಕಂತ್ರಿ ರಾಜಕಾರಣಿಗಳ ಮುಖಾಂತರ, ಭ್ರಷ್ಟ ಅಧಿಕಾರಿಶಾಹಿಯ ಮುಖಾಂತರ, ಲಂಪಟ ಓಟುದಾರರ ಮುಖಾಂತರ ಕ್ಷಣಕ್ಷಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಈ ದೇಶವನ್ನು ಪೃಏಮಿಸುವುದು ನಮಗೆ ಅಸಾಧ್ಯವಾಗಿ ಕಂಡಿತು.
  14. ಸಹಸ್ರಾರು ಮೈಲಿ ದೂರದ ಅಂಡಮಾನಿಗೆ ಶಿಕ್ಷೆ ಅನುಭವಿಸಲು ಅಥವಾ ಮರಣದಂಡನೆಗೆ ಹಿಂದೆಲ್ಲಾ ಹೋಗುತ್ತಿದ್ದ ಖೈದಿಗಳಿಗೆ ಏನೆನ್ನಿಸಿರಬಹುದು? ಭಾರತಕ್ಕೆ ಹೋರಾಡಿ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಏನೆನ್ನಿಸಿರಬಹುದು? ವೀರಸಾವರ್ಕರ್‌ಗೆ ಈ ಕ್ಷಣಗಳು ಹೇಗೆ ಕಂಡಿರಬಹುದು?
  15. ಸಾರ್ವಜನಿಕ ಸ್ವತ್ತು ಎಂದಾದ ಕೂಡಲೇ ಏನಾದರೂ ಮಾಡಿ ಅದನ್ನು ಹಾಳುಮಾಡುತ್ತಾರೆ. ಸಮುದ್ರದ ಮಧ್ಯೆ ಮುಳುಗಿಹೋಗುತ್ತೇವೆನ್ನುವ ಭಯ ಇಲ್ಲದಿದ್ದರೆ ಪ್ರಯಾಣಿಕರು ಹಡಗನ್ನೇ ತಮ್ಮ ಸೂಟ್ ಕೇಸಿಗೆ ತುಂಬಿಕೊಳ್ಳುತ್ತಿದ್ದರೋ ಏನೋ!
  16. ನನಗೆ ನನ್ನ ಕ್ಯಾಬಿನ್ನಿನಲ್ಲಿ ಇದ್ದ ಲೈಫ್ ಜಾಕೆಟ್ಟನ್ನು ನೋಡಿದಾಗೆಲ್ಲ ಕರಿ ನೀಲಿಯ ಸಮುದ್ರದ ಕರೆ ಕೇಳಿದಂತಾಗುತ್ತಿತ್ತು.
  17. ನಾವು ಎಲ್ಲಿಗಾದರೂ ಹೋದರೆ ಪ್ರವಾಸ ಮುಗಿಸಿ ವಾಪಸಾದ ನಂತರ ನಮ್ಮನ್ನು ವಿಚಾರಿಸಿ ವಿವರಗಳನ್ನು ಕೇಳುವ ಮಿತ್ರರ ದೃಷ್ಟಿಯನ್ನೂ ನಾವೂ ಪ್ರವಾಸದಲ್ಲಿ ಪರಿಗಣಿಸುತ್ತೇವೆ.
  18. ರಾಜೀವ್‌ಗಾಂಧಿ ನಮ್ಮ ಜನತೆಗೆ ಹತ್ತಿಸಿರುವ ಇಪ್ಪತ್ತೊಂದನೆಯ ಶತಮಾನದ ಪಿತ್ತ ನೋಡಿದರೆ ಇನ್ನು ಹತ್ತು ವರ್ಷಗಳೊಳಗಾಗಿ ಅಂಡಮಾನ್ ನಾಶವಾಗಬಹುದೆಂದು ನನಗನ್ನಿಸುತ್ತದೆ.
  19. ಮರಗಳಿದ್ದಲ್ಲಿ ಮಲೆಯಾಳಿಗಳನ್ನು ನೋಡಿದರೆ ಶಕುನ ನೋಡಿದಂತಾಗುತ್ತದೆ.
  20. ಪೂಜೆಯ ಭಟ್ಟನಿಗೆ ತೆಂಗಿನಕಾಯಿ ಒಡೆಯಲು ಸುತ್ತಮುತ್ತ ಯಾವ ಕಲ್ಲಾಗಲೀ ಕತ್ತಿಯಾಗಲೀ ಕಾಣಲಿಲ್ಲ. ಹಾಗಾಗಿ ಆತ ಕಾಯನ್ನು ಪಂಪ್ ಸೆಟ್ಟಿನ ಉಕ್ಕಿನ ಕವಚದ ಮೇಲೆ ಕುಕ್ಕಿದ. ಭಟ್ಟನ ಕೈಯಲ್ಲಿದ್ದ ತಿಪಟೂರಿನ ತೆಂಗಿನಕಾಯಿ ಹೇಗಿತ್ತೋ ಹಾಗೇ ಇತ್ತು! ಕಿರ್ಲೋಸ್ಕರ್ ಪಂಪ್ ಸೆಟ್ಟು ಮಾತ್ರ ಸರಿಯಾಗಿ ಎರಡು ಹೋಳಾಯ್ತು!
ಕೃತಿಯ ಹೆಸರು         :    ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್

ಲೇಖಕರು                 :    ಕೆ.ಪಿ. ಪೂರ್ಣಚಂದ್ರ ತೇಜಸ್ವಿ


ಪ್ರಕಾಶಕರು               :    ಪುಸ್ತಕ ಪ್ರಕಾಶನ, ಮೈಸೂರು

1990ರಲ್ಲಿ ಮೊದಲ ಮುದ್ರಣವಾಗಿದ್ದ ಈ ಕೃತಿ 2008ರ ಹೊತ್ತಿಗೆ ಒಂಬತ್ತು ಮುದ್ರಣಗಳನ್ನು ಕಂಡಿದೆ.

ಕೃತಿಯ ಬೆನ್ನುಡಿಯಿದು:
'ಅಲೆಮಾರಿಯ ಅಂಡಮಾನ್' ಕನ್ನಡ ಸಾಹಿತ್ಯದಲ್ಲಿ ಈವರೆಗೂ ಬಂದಿಲ್ಲದಹೊಸರೀತಿಯ ಪ್ರವಾಸ ಕಥನ. ಕಾಲ ಮತ್ತು ದೇಶಗಳಲ್ಲಿ ಅಥವಾ ಚರಿತ್ರೆ ಮತ್ತು ವರ್ತಮಾನಗಳಲ್ಲಿ ಒಮ್ಮೆಲೇ ಚಲಿಸುವ ಬರಹಗಾರರ ಪ್ರಜ್ಞೆ ಅನುಭವುಗಳ ಅನೇಕ ಆಯಾಮಗಳನ್ನು ಒಟ್ಟೊಟ್ಟಿಗೇ ಸೃಷ್ಟಿಸುತ್ತದೆ. ಅಲೆಮಾರಿಯ ಅಂಡಮಾನ್ ಹೊಸರೀತಿಯ ಕಥನತಂತ್ರವನ್ನೇ ಕನ್ನಡ ಸಾಹಿತ್ಯದಲ್ಲಿ ಸೃಷ್ಟಿಸಿದೆ.
***