Friday, December 16, 2011

ವೆನಿಲ್ಲಾ ಬಗ್ಗೆ ತೇಜಸ್ವಿ ಅಂದೇ ಹೇಳಿದ್ದರು!



2003ರಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಸಂವಾದದಲ್ಲಿ "ರೈತನಿಗೆ ಕೃಷಿ ಏಕೆ ಹೊರೆಯಾಗುತ್ತಿದೆ?" ಎಂಬ ಪ್ರಶ್ನೆಗೆ ತೇಜಸ್ವಿ ನೀಡಿದ್ದ ಇಡೀ ಉತ್ತರವನ್ನು ನೋಡಿ:
ವಿಪರೀತ ದೊಡ್ಡ ಪ್ರಶ್ನೆ ಕಂಡ್ರೀ ಇದು! ಇಷ್ಟುದ್ದ ಇದೆ ಅಷ್ಟೆ ಇದು! ಮೊಟ್ಟಮೊದಲನೆಯದಾಗಿ, ಕೃಷಿ ಏಕೆ ಭಾರವಾಗುತ್ತಿದೆ ಅಂದರೆ, ನಮಗೆ, ಅವನಲ್ಲಿ ನಾವು ಏನು ಮಾಡಿದರೂ ಹಿಂಗಿಸಲಾಗದೇ ಇರುವಂತಹ ಒಂದು ದಾಹವನ್ನು ಎಬ್ಬಿಸಿದ್ದೇವೆ. ಓವರ್ ಎಕ್ಸ್‌ಪೆಕ್ಟೇಷನ್ -  ರೈತನಿಗೆ ಜೀವನಮಟ್ಟವನ್ನೆಲ್ಲಾ ಓವರ್ ಎಕ್ಸ್‌ಪೆಕ್ಟೇಷನ್ ಮಾಡೋ ಹಾಗೆ ಮಾಡಿದ್ದೇವೆ ನಾವು. ಇದರಲ್ಲಿ ಅಷ್ಟು ಕೋಟಿ ರುಪಾಯಿ ಬರುತ್ತೆ.... ದಿನ ಬೆಳಗಾದರೆ ಆ ದೂರದರ್ಶನ ಅವರು ಇವರು ಎಲ್ಲಾ... ಮಲ್ಲಿಗೆ ಹೂವು ಬೆಳದರೆ ಅಷ್ಟು ಕೋಟಿ ರುಪಾಯಿ ಮಾಡಬಹುದು, ಇನ್ನೊಂದು ಬೆಳದರೆ ಅಷ್ಟು ಕೋಟಿ ಮಾಡಬಹುದು ಅಂತ, ಆ ರೈತರ ಸಮೇತ ಹೇಳುತ್ತಾ ಇರುತ್ತಾರೆ. ಆದರೆ, ವಾಸ್ತಾವಾಂಶ ಏನು ಅಂತ ಗೊತ್ತಿಲ್ಲ! ಆದರೆ ಸುಮಾರು ಜನ ರೈತರು, ’ಅಷ್ಟು ಕೋಟಿ ಬರುವ ಹಾಗಿದ್ದರೆ ಏಕೆ ಬಿಡಬೇಕು’ ಅಂತ ನೆಗೆದಾಡುತ್ತಾರೆ. ಇನ್ನಷ್ಟು ಜನ ಅದೂ ಬೇಡ, ನೆಟ್ಟಗೆ ಆನ್‌ಲೈನ್ ಲಾಟರಿಗೆ ಹಾಕುತ್ತಾರೆ. ಸ್ಥೂಲವಾಗಿ ಹೇಳುತ್ತಾ ಇರುವುದು ನಾನು ಅಷ್ಟೇನೆ. ಇದು ರೈತನಿಗೆ ಇನ್ಸೆಂಟೀವ್ ಕ್ರಿಯೇಟ್ ಮಾಡುವುದಕ್ಕೆ ಅಗತ್ಯ ಇದೆ. ಇಲ್ಲದೇ ಇರೋವನು ಮಲಗಿಬಿಡುತ್ತಾನೆ ಅಷ್ಟೆ! ಹಾಳಾಗಿ ಹೋಗಲಿ ಅಂತ ಒಂದಷ್ಟು ಕಳ್ಳಭಟ್ಟಿ ಕುಡಿದುಕೊಂಡು ನಿದ್ದೆ ಮಾಡಿಬಿಡುತ್ತಾನೆ! ಇದರಲ್ಲಿಯಾದರೂ ಕೊನೆಪಕ್ಷ ಒಂದಷ್ಟು ದುಡ್ಡಾದರೂ ಸಂಪಾದನೆ ಮಾಡೋಣ ಅಂತ ಹೇಳಿ, ಏನಾದರೂ ಮಾಡುವುದಕ್ಕೆ ಹೋಗುತ್ತಾನೆ. ಅಂದರೆ ಆ ಮಿತಿಯನ್ನು ಮೀರಿ ನಾವು ಅವನಲ್ಲಿ ಆಸೆ ಆಕಾಂಕ್ಷೆಗಳನ್ನು ಗೋಜಲನ್ನು ಎಬ್ಬಿಸಿದ್ದೇವೆ. ಈಗ ವೆನಿಲ್ಲಾ ಬೆಳೆಯೋದಿಕ್ಕೆ ಅಂತ ಕಂಡಾಪಟ್ಟೆ ಓಡಾಡುತ್ತಾ ಇದ್ದಾರೆ. ಇವತ್ತು ಬೇಕಾದರೆ ನಾನು ಹೇಳುತ್ತಾ ಇದ್ದೇನೆ; ’ಮೂರು ವರ್ಷ ಆದ ಮೇಲೆ ವೆನಿಲ್ಲಾ ಬೆಳೆದು ಅಲ್ಲಿ ನೇಣು ಹಾಕಿಕೊಂಡರಂತೆ, ಇಲ್ಲಿ ನೇಣು ಹಾಕಿಕೊಂಡರಂತೆ. ಸರ್ಕಾರದವರು ಅವರಿಗೆ ಬೆಂಬಲ ಬೆಲೆ ಡಿಕ್ಲೇರ್ ಮಾಡಬೇಕು, ಸಹಾಯ ಧನ ಕೊಡಬೇಕು’ ಅಂತಾರೆ. ಹಿಂದು ಮುಂದು ನೋಡದೆ ನೆಗೆದು ಹಾರುವವರು ಇವರು. ಆಮೇಲೆ ಗೌರ‍್ನಮೆಂಟಿನೋರು ಬಂದು ಇವರಿಗೆ ಬೆಂಬಲ ಬೆಲೆ ಸಹಾಯಧನ ಎಲ್ಲಾ ಕೊಡಬೇಕು ಅಂತ ಗಲಾಟೆ ಮಾಡುವುದಕ್ಕೆ ಶುರು ಮಾಡುತ್ತಾರೆ. ಇದು ವೆನ್ನಿಲ್ಲಾಗೂ ಆಗುತ್ತೆ! (ಈ ಮಾತು ನೂರಕ್ಕೆ ನೂರು ನಿಜವಾಗಿರುವುದನ್ನು ನಾವು ಗಮನಿಸಬೇಕಾಗಿದೆ) ಇವೆಲ್ಲಾ ನಾವೇ ಮಾಡುತ್ತಿರುವಂತಹ ಅನಾಹುತ. ಹಾಗೆ ಮಾಡಿ ಹೀಗೆ ಮಾಡಿ ಕ್ಷಣಮಾತ್ರದಲ್ಲಿ ಕೋಟ್ಯಾಧಿಪತಿ ಆಗಬಹುದು ಅಂತ ಆಸೆ ಎಬ್ಬಿಸಿದರೆ, ಅವನು ನೇಣು ಹಾಕಿಕೊಳ್ಳುವ ಲೆವೆಲ್ಲಿಗೆ ಹೋಗುತ್ತೆ!

Monday, December 12, 2011

ಜನನ ಮರಣಾತೀತವಾಗಿರುವುದಾತ್ಮ! ಎರಡು ಚರಮಗೀತೆಗಳು

ಪ್ರತೀ ಪರೀಕ್ಷೆಯ ನಂತರ ಬರುತ್ತಿದ್ದ ರಜಾದಿನಗಳಲ್ಲಿ ಹಾಗೂ ಅವಕಾಶ ಸಿಕ್ಕಾಗಲೆಲ್ಲಾ ತನ್ನ ಮಲೆನಾಡಿಗೆ ಕವಿ ಓಡುತ್ತಿದ್ದುದು ಸರಿಯಷ್ಟೆ. ಅಲ್ಲಿಯ ಮಲೆ, ಕಾಡು, ನದಿ, ಹಕ್ಕಿ, ಪ್ರಾಣಿ, ಸೂರ್ಯಾಸ್ತ, ಸೂರ್ಯೋದಯ, ಚಂದ್ರೋದಯ, ಗೆಳೆಯರ ಜೊತೆ ಅಲೆದಾಟ, ಬೇಟೆ, ಕಾಡು, ಕಾಡುಹರಟೆ, ತನ್ನ ಸಾಹಿತ್ಯ ಸಾಧನೆ, ಆದ್ಯಾತ್ಮ ಇವುಗಳಲ್ಲಿ ಕವಿಚೇತನ ಮುಳುಗೇಳುತ್ತಿತ್ತು. ಆದರೆ ಕವಿಯೇ ಹೇಳುವಂತೆ, ಮನೆಯಲ್ಲಿ ನಡೆಯುತ್ತಿದ್ದ ಮದುವೆ, ಹುಟ್ಟು, ಸಾವುಗಳ ವಿಚಾರದಲ್ಲಿ ಅವರು ಅತ್ಯಂತ ಉದಾಸೀನರಾಗಿದ್ದರು. ತಂದೆಯ ಮರಣ ಇನ್ನೂ ಚಿಕ್ಕವನಿದ್ದಾಗಲೇ ಘಟಿಸಿಬಿಟ್ಟಿತ್ತು. ಆದರೆ ಯೌವ್ವನಕ್ಕೆ ಕಾಲಿಟ್ಟ ಮೇಲೆ ಘಟಿಸಿದ ತಾಯಿಯ ಮರಣ, ತಂಗಿಯರಿಬ್ಬರ ಮದುವೆ, ಮರಣ, ಅಜ್ಜಯ್ಯನ ಸಾವು, ಜೊತೆಗೆ ಮನೆಯಲ್ಲಿದ್ದ ಇತರ ಅಮ್ಮಂದಿರ ಸಾವು ಇವೆಲ್ಲವನ್ನೂ ಕವಿಚೇತನ ನಿರ್ಲಕ್ಷಿಸಿದ ಹಾಗೆ ಪುಟ್ಟಪ್ಪನವರ ದಿನಚರಿಯೂ ನಿರ್ಲಕ್ಷಿಸಿಬಿಟ್ಟಿದೆ. ದಿನಚರಿಯಲ್ಲಿ ಉಲ್ಲೇಖವಾಗಿದ್ದರೂ ಅದು ಒಂದೆರಡು ಸಾಲಿನ ಮಟ್ಟಿಗೆ ಮಾತ್ರ! ಹೀಗೆ ದಿನಚರಿ ಲೆಕ್ಕಿಸದಿದ್ದರೂ, ಅಪ್ರಕಟಿತವಾಗಿರುವ ಎರಡು ಕವಿತೆಗಳು ಮನೆಯಲ್ಲಿ ನಡೆದ ಎರಡು ಸಾವಿನ ಸಂದರ್ಭಗಳನ್ನು ಅನುಲಕ್ಷಿಸಿ ರಚಿತವಾದ ಚರಮಗೀತೆಗಳಾಗಿವೆ.

'ಮೋಕ್ಷಗತನಾದ ನನ್ನ ಮುದ್ದು ಸೋದರ ವಾಸುವ ನೆನಪಿಗೆ ಬರೆದ ಚರಮಗೀತೆ’ ಎಂಬ ಟಿಪ್ಪಣಿಯನ್ನೊಳಗೊಂಡ ’ಶ್ರೀವಾಸ’ ಎಂಬುದು ೧೬.೧.೧೯೨೭ರ ರಚನೆಯಾಗಿದ್ದು, ಸೋದರ ವಾಸಪ್ಪನ ಅಕಾಲ ಮರಣವನ್ನು ಕಂಡು ದುಃಖಿಸುತ್ತದೆ. ಕವಿಯ ದೊಡ್ಡ ಚಿಕ್ಕಪ್ಪಯ್ಯನವರ ಹಿರಿಯ ಹೆಂಡತಿಯ ಕಿರಿಯಮಗ ವಾಸಪ್ಪ. ದೇವಂಗಿಯ ಮಿಷನ್ ಸ್ಕೂಲಿನಲ್ಲಿ ಓದಿ, ದೇವಂಗಿ ರಾಮಣ್ಣಗೌಡರ ಆಶ್ರಯದಲ್ಲಿ ಮುಂದಿನ ಓದಿಗಾಗಿ ಶಿವಮೊಗ್ಗಕ್ಕೆ ಕಳುಹಿಸಿದ್ದರು. ಅಲ್ಲಿ ಟೈಫಾಯ್ಡ್ ಆಗಿದ್ದ ಆತ, ಒಂದು ದಿನ ನಡುರಾತ್ರಿಯಲ್ಲಿ ಈ ಲೋಕದ ನಂಟನ್ನು ಕಡಿದುಕೊಂಡು ಹೊರಡುತ್ತಾನೆ.

ಮೈಸೂರಿನಲ್ಲಿ ಓದುತ್ತಿದ್ದ ಅಣ್ಣ ಊರಿಗೆ ಬಂದಾಗಲೆಲ್ಲಾ ಮನೆಯಲ್ಲಿ ಕಿರಿಯನಾಗಿದ್ದ ವಾಸುವಿಗೆ ಸಂಭ್ರಮವೇ ಸಂಭ್ರಮ. ಅವನ ಮುಗ್ಧ ಆಟಪಾಟ ನಡೆನುಡಿ ಹುಡುಗಾಟ ಅಣ್ಣನಿಗೂ ಇಷ್ಟವಾಗುತ್ತಿದ್ದುವು. ಕಾಡಿನಲ್ಲಿ ಅಲೆದಾಡಲು, ಕವಿಶೈಲಕ್ಕೆ ಹೋದಾಗ, ತೋಟದಲ್ಲಿ ತಿರುಗಾಡುವಾಗ, ಕೆರೆಯಲ್ಲಿ ಈಜಾಡುವಾಗ ತಮ್ಮನ ಸಾನಿಧ್ಯ ಅಣ್ಣನಿಗಿರುತ್ತಿತ್ತು. ಅವೆಲ್ಲವನ್ನೂ ನೆನೆಯುತ್ತಾ, ಚಿಕ್ಕವಯಸ್ಸಿನಲ್ಲೇ ಅಸ್ತಂಗತನಾದ ತಮ್ಮನಿಗಾಗಿ ಹಂಬಲಿಸುತ್ತದೆ ಕವಿಮನ. ಶ್ರೀವಾಸ ಚರಮಗೀತೆ ಅತ್ಯಂತ ದೀರ್ಘವಾಗಿದ್ದು, ೨೨೭ ಸಾಲುಗಳವರೆಗೆ ವಿಸ್ತರಿಸಿದೆ. ಹಲವಾರು ಪ್ರಶ್ನೆಗಳನ್ನೆತ್ತುತ್ತಲೇ ಕವಿತೆ ಪ್ರಾರಂಭವಾಗುತ್ತದೆ.
ಶ್ರೀವಾಸನಳಿದನೇ? ಬಾಡಿತೇ ಎಳೆಯಲರು
ಹೂವಾಗಿ ಕಾಯಾಗಿ ಫಲಿಸುವಾ ಮುನ್ನ?
ಏಕಿಂತುಟೊಣಗಿದೈ, ಮಲ್ಲಿಕಾ ಬಾಲಲತೆ,
ಚೈತ್ರಮಾಸವು ಬಂದು ಮುದ್ದಿಡುವ ಮುನ್ನ?
ಬೇಸರಾಯಿತೆ ನಿನಗೆ ಧರೆಯ ಹೂದೋಟ?
ಬೇಡವಾದುದೆ ನಿನಗೆ ತಂಬೆಲರ ತೀಟ?
ಪೂರೈಸಿತೇ ನಿನ್ನ ಇಹಲೋಕದಾಟ?
ನಿನಗಿನ್ನು ಪರಲೋಕವೇ ಪರಮಪೀಠ?................
ಅಕಾಲದಲ್ಲಿ ಶ್ರೀವಾಸನಳಿದುದ್ದರಿಂದ ಪ್ರಕೃತಿಯೂ ಶೋಕಿಸುತ್ತಿರುವ ಚಿತ್ರಣವನ್ನು ಕಟ್ಟಿಕೊಡುತ್ತಲೇ, ಮತ್ತೆ ಪ್ರಶ್ನಿಸುತ್ತಾರೆ.
ಹೋದನೇ? ಹಾ! ಇನ್ನು ಹಿಂತಿರುಗಿ ಬಾರನೇ?
ಇನ್ನು ತನ್ನಣ್ಣನಿಗೆ ಬಂದು ಮೊಗದೋರನೇ?
’ಅಣ್ಣಯ್ಯ, ಬಾ!’ ಎಂದು ಕರೆಯನೇ ಎನ್ನ?
ತೊರೆದೆಯಾ ನೀನೆನ್ನ, ಮುದ್ದಿನೆನ ತಮ್ಮಾ?
ಶ್ರೀವಾಸ, ಎನ್ನ ಹೃದಯದ ಹರುಷದಾವಾಸ,.......................
ಕವಿತೆಯ ಈ ಭಾಗದ ಓಟ, ಸೀತೆಯ ಅಗಲಿಕೆಯಿಂದ ವಿಸ್ಮೃತಿಗೆ ಒಳಗಾಗಿ ಗೋಳಾಡುವ ರಾಮನ ಚಿತ್ರಣವನ್ನು ನೆನಪಿಸುತ್ತದೆ. ಮುಂದೆ, ಕವಿ ತಮ್ಮನೊಡನೆ ಕಳೆಯುತ್ತಿದ್ದ ಕಾಲವನ್ನು ನೆನಪಿಸಿಕೊಳ್ಳುತ್ತಾರೆ.
ಎನ್ನೊಡನೆ ವನಗಳಿಗೆ ಬರುವರಿನ್ನಾರು?
ಹೊಲಗದ್ದೆಯೊಳು ಕೂಡಿ ತಿರುಗಾಡುವವರಾರು?
ಮನೆಯ ಮುಂದಿನ ಕೆರೆಯೊಳೀಜುತಿರೆ ನಾನು
ನಿಂತು ಎನ್ನ ಹೊಗಳುವವರಾರು?
ನೀರಿಗಿಳಿಯಲು ಬೇಡ ಎಂದಾರ ಬೆದರಿಸಲಿ?
..................
ಆ ಮರವ ನೋಡಣ್ಣ! ಈ ಹೂವ ನೋಡಣ್ಣ!
ಕೋಗಿಲೆಯ ಕೇಳಣ್ಣ! ಹಾಡೆಷ್ಟು ಇಂಪಣ್ಣ!
ಅಲ್ಲಿ ಹಣ್ಣಿವೆ, ಅಣ್ಣ! ನಾನು ಕಂಡಿಹೆನಣ್ಣ!
ಮಳೆಬಿಲ್ಲ ನೋಡಣ್ಣ! ಬಾ ಎನ್ನ ಜೊತೆ, ಅಣ್ಣ!
ಅಣ್ಣ ತಮ್ಮಂದಿರ ಒಡನಾಟಕ್ಕೆ ಸಾಕ್ಷಿಯಾಗಿವೆ ಮೇಲಿನ ಸಾಲುಗಳು. ಮುಂದೆ, ತಮ್ಮನ ಸಾವಿನಿಂದ ತಮಗೆ ಕವಿದ ಶೂನ್ಯತೆಯ ಬಗ್ಗೆ ಹೇಳಿ, ಸಾವು ಸಂಭವಿಸಿದ ಕ್ಷಣವನ್ನು ಕಣ್ಣ ಮುಂದೆ ನಿಲ್ಲಿಸುತ್ತಾರೆ.
ನಡುರಾತ್ರಿ ಒಯ್ದಿತೇ ನಿನ್ನನೆಲೆ ಸೋದರನೆ?
ಹಗಲೊಳೊಯ್ಯಲು ಯಮನು ಬೆದರಿದನು ನಿನಗೆ;
ಕಳ್ಳನಾದನೆ ಮೃತ್ಯು? ಧರ್ಮವಂ ಮೀರಿದನೆ
ನಿನ್ನ ಮಹಿಮೆಗೆ ಬೆದರಿ? ಸುಡು ಯಮನ ಬಾಳ!
ಹೀಗೆ ಯಮನ ಅಕೃತ್ಯವನ್ನು ಖಂಡಿಸುತ್ತಾ, ಅದನ್ನು ಖಗ-ಮೃಗ, ತರು-ಲತೆ, ಮಲೆ-ಕಾಡು ಮೊದಲಾದವುಗಳು ನಿದ್ರಿಸುತ್ತಿರುವಾಗ ಯಮ ಕದ್ದೊಯ್ದನಲ್ಲ! ಆತ ಹಾಗೆ ಮಾಡಲು ನನ್ನ ಸಹೋದರ ಧೀರಾತ್ಮನಾಗಿದ್ದುದೇ ಕಾರಣವೆನ್ನುತ್ತಾರೆ. ಮುಂದುವರೆದು ಸಾವಿನ ಅನಂತತೆಯ, ಅನಿವಾರ್ಯತೆಯ ಕಡೆಗೆ ತಿರುಗುತ್ತಾರೆ.
ಬಾರನೇ? ಹೋದನೇ? ಶೂನ್ಯಗತನಾದನೇ?
ಆಟವೋ? ನಾಟಕವೊ? ಭೂತಳವಿದೇನು?
ಪಾತ್ರಧಾರರೊ ನಾವು ಸೂತ್ರಧಾರನ ಕೈಲಿ?
ಎಲ್ಲಿಂದ ಬಂದಿಹೆವು? ಹೋಗುತಿಹೆವಾವೆಡೆಗೆ?
ಮಾಯೆಯೋ? ಸ್ವಪ್ನವೋ ಸತ್ಯವೋ ನಿತ್ಯವೋ?
ಪಥವಾವುದೆಮಗೆಲ್ಲ? ಗತಿಯಾವುದು?
ಶೂನ್ಯದಿಂದಲೆ ಬಂದು ಶೂನ್ಯಗತವಾಗುವೆವೆ?
ಸತ್ಯದಿಂದಲೆ ಬಂದು ಮಿಥ್ಯೆಯೊಳು ನಿಂದು
ಸತ್ಯಗತವಾಗುವೆವೆ ಮತ್ತೆ? ಬಲ್ಲವರದಾರು?
ಮೃತ ಎಂಬುದದು ಸುಳ್ಳೆ? ಅಮೃತವದು ಸತ್ಯವೇ?
ಸಂದೇಹದಲಿ ಕುಂದಿ ಕೊರಗುವೆವು ನಾವು!
ಹೀಗೆ ಸಂದೇಹದಲ್ಲಿ, ಶೂನ್ಯದಲ್ಲಿ ಕವಿಯ ಜೀವ ತೊಳಲಾಡುತ್ತದೆ. ಆದರೆ, ಕವಿಯ ವಿವೇಕದ ವಾಣಿ, ಗುರುವಿನ ಅಭಯ, ದೇವನ ಕೃಪೆ ಸಮಾಧಾನ ಹೇಳುತ್ತದೆ, ಕೆಳಗಿನಂತೆ!
’ಬೆದರ ಬೇಡಲೆ ಜೀವ ಬೆದರಬೇಡ;
ಸಂದೇಹವನು ಬಿಡು, ನಿರಾಶನಾಗದಿರು.
ಶೂನ್ಯವಲ್ಲದು ಸತ್ಯ; ಅಮೃತ, ಅದು ನಿತ್ಯ!
ಜನನವಲ್ಲವು ಮೊದಲು, ಮರಣವಲ್ಲವು ತುದಿಯು,
ಜನನ ಮರಣಾತೀತವಾಗಿರುವುದಾತ್ಮ!
ಮೇಲ್ನೋಟಕ್ಕೆ ನಶ್ವರದಂತೆ ಕಾಣುವ ಈ ಬದುಕಿಗೆ ಒಂದು ಘನ ಉದ್ದೇಶವಿರುತ್ತದೆ. ನಮ್ಮ ಚಿಂತನಾನಿಲುವಿಗೆ ಅಸದಳವಾದ ಶಕ್ತಿಯೊಂದು ಈ ವಿಶ್ವವನ್ನು ಧರ್ಮದಿಂದಾಳುತ್ತಿದೆ! ಆದ್ದರಿಂದ ಇಲ್ಲಿ ನಡೆಯುವ ರವಿಯುದಯ, ತಾರೆಗಳ ಚಲನೆ, ಗಾಳಿ, ಬೆಂಕಿ ಎಲ್ಲವೂ ಗತಿಯನಗಲದೆ ಧರ್ಮದಿಂದ ಕಾರ್ಯವನ್ನಾಚರಿಸುತ್ತಿವೆ. ಅಂತೆಯೆ ಸಾವೂ ಕೂಡಾ! ಅದೂ ಕೂಡಾ ವಿಶ್ವನಿಯಾಮಕನ ಮನೋಗತವೇ ಆಗಿದೆ.
ಆನಂದದಿಂದುದಿಸಿ ಆನಂದದೊಳೆ ಬೆಳೆದು
ಆನಂದದೊಳಗೈಕ್ಯವಾಗುವುದು ಈ ಸೃಷ್ಟಿ!
ಸಾವು ಸಾವಲ್ಲವೈ, ಅದು ಪರಮ ಬಾಳು,
ಸಂಶಯಾತ್ಮಕನಾಗದಿರು, ಜೀವ, ಮೇಲೇಳು!
ಆದ್ದರಿಂದ,
ಶ್ರೀವಾಸನಳಿದಿಲ್ಲ; ಶೂನ್ಯಗತನಾಗಿಲ್ಲ:
ಸಾವು ಸತ್ತಿತು, ವಾಸನಳಿದಿಲ್ಲ, ಇಲ್ಲ!
ಬೊಮ್ಮದೊಳಗೊಂದಾಗಿ ಆನಂದದಿಂದಿಹನು;
ಹೀಗೆ ಸಮಾಧಾನ ಹೇಳುತ್ತಲೇ ಸಾವಿಗಾಗಿ ದುಃಖಿಸುವುದು ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬರುತ್ತಾರೆ.
ಶೋಕಿಸೆನು ನಿನಗಾಗಿ; ಕಂಬನಿಯ ಕರೆಯೆ;
ಮರುಳುತನವೈ ವ್ಯಸನ; ದುಃಖವದು ಮಾಯೆ!
ಎಲೆ ಮುದ್ದು ಸೋದರನೆ, ಎನ್ನಾತ್ಮದಾತ್ಮ,
ನೀನಿರುವೆ! ನೀನಿರುವೆ! ಎಲ್ಲಿಯೂ ಇರುವೆ!
ಎಂದು ತನ್ನ ಸುತ್ತ ಮುತ್ತ ಕಾಣುವ ಶಶಿ, ತಾರೆ, ರವಿ, ನಭ, ಧರೆ, ಕಾಲ, ದೇಶ ಎಲ್ಲವುಗಳಲ್ಲಿಯೂ ತಮ್ಮನಿದ್ದಾನೆ ಎನ್ನುತ್ತಾರೆ. ಕೊನೆಯಲ್ಲಿ,
ಹರ್ಷವಾಗಲಿ ಶೋಕ! ಮೋದವಾಗಲಿ ಖೇದ!
ದುಃಖಾಶ್ರು ಸುಖದ ಕಂಬನಿಯಾಗಲಿ!
ಮರಣವೆಂಬುದು ಮಧುರ! ಮೃತ್ಯು ಮಾತೆಯ ಉದರ!
ಸುಖಿಯಾದೆಯೈ ನೀನು ಸುಖ ದುಃಖಗಳ ಮೀರಿ!
ಕಾಲ ದೇಶವ ಮೀರಿದೂರು ನಿನ್ನದು, ತಮ್ಮ,
ಅದು ನಮ್ಮ ತವರೂರು! ಅಲ್ಲಿಹಳು ಅಮ್ಮ
ಜಗದಂಬೆ ಜೋಗುಳದಿ ಕರೆಯುತೆಮ್ಮ!
ಆಲಿಸುವೆನಮ್ಮನಾ ಜೋಗುಳವ ನಾನು,
ಎಂದಾದರೊಂದು ದಿನ ಸೇರುವೆನು ನಿನ್ನ.
ಅಲ್ಲಿಗಾನೈತರಲು ಮರೆಯದಿರು ನನ್ನ!
ಅಣ್ಣ ಬಂದಾ ಅಣ್ಣ! ಅಮ್ಮ, ನೋಡೆಂದು
ಅಪ್ಪಿಕೊಂಡೆನ್ನ ಕರೆದೊಯ್ಯೆಲೈ ತಮ್ಮ!
ತಾಯಿಯಂಕದ ಮೇಲೆ ನಾವಿರ್ವರೂ ಕೂಡಿ
ಮನ ಬಂದವೊಲು ತೊದಲು ಮಾತುಗಳನಾಡಿ
ನಿತ್ಯತೆಯ ಪೀಡಿಸುವ ಚೆಲ್ಲಾಟವಾಡಿ!
ಎಂದು ತಮ್ಮನಾತ್ಮವನ್ನು ಜಗದಂಬೆಯ ಉದರಕ್ಕೆ ಹಾಕುತ್ತಾರೆ. ಮುಂದೊಂದು ದಿನ ತಾನು ಅಲ್ಲಿಗೆ ಹೋಗುವಷ್ಟರಲ್ಲಿ, ತಮ್ಮನೇ ಅಣ್ಣನನ್ನು ಜಗದಂಬೆಗೆ ಪರಿಚಯಿಸುತ್ತಾನೆ ಎಂಬ ಭಾವದೊಂದಿಗೆ ಕವಿತೆ ಮುಕ್ತಾಯವಾಗುತ್ತದೆ. ಈ ಚರಮಗೀತೆಯ ವಸ್ತು ವಿಷಯ ಭಾವ ಪ್ರಸ್ತುತಿ ಕುರಿತಂತೆ ಕವಿಯ ಮಾತುಗಳೇ ಅಂತಿಮ; ಬೇರೆ ವಿಮರ್ಶೆ ವಿವರಣೆ ಒಗ್ಗರಣೆ ಏಕೆ ಬೇಕು!? ಕವಿಯ ಮಾತುಗಳು ನೆನಪಿನ ದೋಣಿಯಲ್ಲಿ ಹೀಗೆ ದಾಖಲಾಗಿವೆ.
ಈ ಸುದೀರ್ಘ ಚರಮಗೀತೆಯಲ್ಲಿ ತತ್ಕಾಲದಲ್ಲಿ ಕವಿಗೆ ಜೀವ, ಜಗತ್ತು, ದೇವರು, ಹುಟ್ಟು, ಸಾವು, ಸೃಷ್ಟಿಯ ಉದ್ದೇಶ ಇತ್ಯಾದಿಗಳ ವಿಚಾರದಲ್ಲಿ ಇದ್ದ ಭಾವನೆಗಳೆಲ್ಲ ಚೆಲ್ಲಿ ಸೂಸಿದಂತಿದೆ. ಭಾವೋತ್ಕರ್ಷದ ಅಭಿವ್ಯಕ್ತಿಯಲ್ಲಿ ಸಂಯಮಭಾವ ತೋರಿರುವುದು ಆವೇಶದ ದುರ್ದಮ್ಯತೆಯನ್ನೂ ಅನುಭವದ ಹೃತ್ಪೂರ್ವಕತೆಯನ್ನೂ ಸೂಚಿಸುತ್ತದೆ. ಬೆಳೆಯುತ್ತಿರುವ ಕವಿಯ ಮನಸ್ಸು ಸೃಷ್ಟಿಯ ರಹಸ್ಯಗಳೊಡನೆ ಮಲ್ಲಗಾಳೆಗವಾಡುತ್ತಿತ್ತೆಂದು ತೋರುತ್ತದೆ. ಆಶ್ರಮವಾಸದ ಪ್ರಭಾವವನ್ನೂ ಚೆನ್ನಾಗಿ ಗುರುತಿಸಬಹುದು.
ಭದ್ರಾವತಿಯ ಡಾ. ಚೊಕ್ಕಂ ಅವರ ಆಸ್ಪತ್ರೆಯಲ್ಲಿ ನ್ಯೂಮೋನಿಯಾದಿಂದ ಮುಕ್ತಿ ಪಡೆದು, ಊರಿಗೆ ಹೊರಡುತ್ತಾರೆ. ಶಿವಮೊಗ್ಗದಲ್ಲಿ ಸ್ವಲ್ಪ ದಿನಗಳಿದ್ದು, ಸಂಪೂರ್ಣ ಚೇತರಿಸಿಕೊಂಡು ಕುಪ್ಪಳ್ಳಿಗೆ ಹೋಗುವ ಹಾದಿಯಲ್ಲಿ ಇಂಗ್ಲಾದಿಗೆ ಹೋಗಿ ತಂಗುತ್ತಾರೆ. ಅಲ್ಲಿನ ಮಿತ್ರವರ್ಗದವರೊಡನೆ ಸೇರಿ ಬೇಟೆಗೆ ಹೋಗುತ್ತಾರೆ. ಆಗ ನಡೆದ ಒಂದು ದುರ್ಘಟನೆಯೇ ಇನ್ನೊಂದು ಚರಮಗೀತೆಯ ಹುಟ್ಟಿಗೆ ಕಾರಣವಾಗುತ್ತದೆ. ಈ ಚರಮಗೀತೆಯ ವಿಶೇಷವೆಂದರೆ, ಅದು ಮನುಷ್ಯನಿಗೆ ಸಂಬಂಧಿಸದೆ ’ಕೇಸರಿ’ ಹೆಸರಿನ ಬೇಟೆ ನಾಯಿಗೆ ಸಂಬಂಧಿಸಿರುವುದು. ತಾವು ಸಾಕಿದ ನಾಯಿಗಳು ಮರಣವೊಂದಿದಾಗ ಅವುಗಳಿಗೆ ಗೌರವಪೂರ್ವಕ ಸಂಸ್ಕಾರ ನಡೆಸುವ, ಸ್ಮಾರಕಗಳನ್ನು ನಿರ್ಮಿಸಿರುವ ನೂರಾರು ಉದಾಹರಣೆಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ. ಯುದ್ಧದಲ್ಲಿ ತುರುಗೋಳು, ಪೆಣ್ಬುಯಲು ಮೊದಲಾದ ಕಾದಾಟದಲ್ಲಿ ಹೋರಾಡಿ ಮರಣ ಹೊಂದಿದ್ದ ವೀರರ ನೆನಪಿಗಾಗಿ ವೀರಗಲ್ಲುಗಳನ್ನು ಹಾಕಿಸುವ ಬಹುದೊಡ್ಡ ಪರಂಪರೆಯೇ ಕನ್ನಡ ನಾಡಿನಲ್ಲಿರುವುದನ್ನು ನೋಡಬಹುದಾಗಿದೆ. ಮಂಡ್ಯಜಿಲ್ಲೆಯ ಆತಕೂರಿನಲ್ಲಿದ್ದ ಕ್ರಿ.ಶ. ೯೪೮ನೇ ಇಸವಿಯ ಸ್ಮಾರಕವನ್ನು ಈಗ ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ.  ಶಾಸನದ ಜೊತೆಯಲ್ಲಿ (ನಡುವೆ) ನಾಯಿ ಹಂದಿಯೊಂದಿಗೆ ಹೋರಾಡುತ್ತಿರುವ ಉಬ್ಬು ಶಿಲ್ಪವೂ ಇದೆ. ರಾಷ್ಟ್ರಕೂಟ ದೊರೆ ಮೂರನೇ ಕೃಷ್ಣನ ಬಳಿಯಿದ್ದ ಕಾಳಿ ನಾಯಿಯನ್ನು ವೀರ ಮಣೆಲರ ಬೇಡಿ ಪಡೆದುಕೊಳ್ಳುತ್ತಾನೆ. ಕಲ್ಲುಗುಡ್ಡವೊಂದರಲ್ಲಿ ಹಂದಿಗೂ ‘ಕಾಳಿ’ ನಾಯಿಗೂ ಹೋರಾಟವಾಗಿ, ಅಂತ್ಯದಲ್ಲಿ ಹಂದಿ-ನಾಯಿಗಳೆರಡೂ ಸತ್ತುಹೋಗುತ್ತವೆ! ನಾಯಿಯ ಶವವನ್ನು ಆತಕೂರಿಗೆ ತಂದು ಸಂಸ್ಕಾರ ಮಾಡಿ ಶಾಸನ-ಸ್ಮಾರಕಶಿಲೆಯನ್ನು ನೆಡೆಸುತ್ತಾನೆ.

ಇಲ್ಲಿಯೂ, ಕವಿಗೆ ಅಚ್ಚುಮೆಚ್ಚಾಗಿದ್ದ ’ಕೇಸರಿ’ ಜೂಲುನಾಯಿ, ಒಂಟಿಗ ಹಂದಿಯೊಂದನ್ನು ತಡೆದು ಹೋರಾಡಿ, ಅದರ ಕೋರೆಗೆ ತುತ್ತಾಗುತ್ತದೆ. ಹೊಟ್ಟೆಯಿಂದ ಹೊರಕ್ಕೆ ಬಂದಿದ್ದ ಕರುಳಿನ ಭಾಗ, ನಾಯಿ ಬಿದ್ದು ಹೊರಳಾಡಿದಾಗ ಮಣ್ಣು ಕಸ ಕಡ್ಡಿಗಳಿಂದ ಆವೃತ್ತವಾಗುತ್ತದೆ. ಅದರ ಯಮಯಾತನೆಯನ್ನು ನೋಡಿ, ಅದು ಬದುಕುವುದಿಲ್ಲವೆಂದು ತಿರ್ಮಾನಿಸಿ ಅದರ ತಲೆಗೆ ಗುಂಡು ಹೊಡೆದು ಕೊಲ್ಲಲು ಕವಿಯೇ ಸೂಚನೆ ನೀಡುತ್ತಾರೆ. ಆದರೆ ಗುಂಡು ಹೊಡೆಯುವ ಎದೆಗಾರಿಕೆ ಅಲ್ಲಿ ಯಾರಿಗೂ ಇಲ್ಲ. ಕೇಸರಿಗೆ ಆ ಸ್ಥಿತಿಯನ್ನು ತಂದಿದ್ದ ಹಂದಿಯನ್ನು ಕೊಂದು ಅಂದಿನ ’ಹೀರೊ’ ಅಗಿದ್ದ ಈಡುಗಾರ ಮರಾಠಿ ’ಯಲ್ಲು’ ಎಂಬಾತ ಅದಕ್ಕೆ ಶುಶ್ರೂಷೆ ಮಾಡಲು ತೊಡಗುತ್ತಾನೆ. ಹೊರಬಂದಿದ್ದ ಕರುಳನ್ನು, ತಕ್ಕಮಟ್ಟಿಗೆ ಕೈಯಿಂದ ಸ್ವಚ್ಛಗೊಳಿಸಿ, ಹೊಟ್ಟೆಯೊಳಗೆ ತಳ್ಳಿ, ಸೂಜಿದಾರದಿಂದ ಹೇಗೆ ಹೇಗೋ ಒಲಿದುಬಿಡುತ್ತಾನೆ, ಮೂಟೆ ಹೊಲಿಯುವಂತೆ! ಅಷ್ಟೂ ಹೊತ್ತು ಕೇಸರಿ ಪಿಳುಪಿಳನೆ ಕಣ್ಣು ಬಿಟ್ಟುಕೊಂಡು ಉಳಿದವರ ಕಡೆ ದೈನ್ಯದೃಷ್ಟಿ ಬೀರುತ್ತಿತ್ತು. ಹಳ್ಳದಿಂದ ನೀರು ತಂದು ಕುಡಿಸಿದ ನಂತರ ಕಂಬಳಿಯೊಂದನ್ನು ಡೋಲಿಯ ರೀತಿಯಲ್ಲಿ ಮಾಡಿಕೊಂಡು ಮನೆಗೆ ಹೊತ್ತು ತರುತ್ತಾರೆ. ರಾತ್ರಿ ತುಂಬಾ ಹೊತ್ತು ನೋವಿನಿಂದ ಅಳುತ್ತಿದ್ದ ಕೇಸರಿ, ಬೆಳಗಿನ ಜಾವ ನೋಡಿದಾಗ ಸಂಪೂರ್ಣ ನಿಃಶಬ್ದವಾಗಿತ್ತು, ಪ್ರಾಣ ಹೋಗಿ! ಕೇಸರಿಗೆ ವೀರೋಚಿತವಾದ ಸಂಸ್ಕಾರ ಸಲ್ಲುತ್ತದೆ. (ಏನೋ ಕಾರಣದಿಂದ, ಹೀಗೆಯೆ ಹೊಟ್ಟೆಯ ಭಾಗದಲ್ಲಿ ಸ್ವಲ್ಪಮಾತ್ರ ಹೊರಬಂದಿದ್ದ ಕರುಳನ್ನು ಒಳಗೆ ತಳ್ಳಿ ನಮ್ಮ ಮನೆಯ ನಾಯಿಯೊಂದಕ್ಕೆ ನಮ್ಮ ತಂದೆಯವರೂ ಹೊಲಿಗೆ ಹಾಕಿದ್ದನ್ನು ನಾನು ನೋಡಿದ್ದೇನೆ. ಆಶ್ಚರ್ಯವೆಂದರೆ ಆ ನಾಯಿ ವರ್ಷಗಳ ಕಾಲ ಬದುಕಿತ್ತು).

ಕೇಸರಿಯ ಹೋರಾಟ, ಅದರ ಕೆಚ್ಚು ಮೊದಲಾದವನ್ನು ಕಂಡ ಬೇಟೆಗಾರ ಪುಟ್ಟಪ್ಪ; ಕವಿ ಕುವೆಂಪು ಆಗಿ ಕೇಸರಿಗೆ ಚರಮಗೀತೆ ಹಾಡುತ್ತಾರೆ. ಈ ಚರಮಗೀತೆ ಅಪ್ರಕಟಿತವಾಗಿದ್ದು, ಶೀರ್ಷಿಕೆಯೂ ಇರುವುದಿಲ್ಲ. ಆದರೆ, ’ಬೇಟೆಯಲ್ಲಿ ಕಾಡುಹಂದಿಯೊಡನೆ ಹೋರಾಡಿ ಮಡಿದ ಮುದ್ದು ನಾಯಿ ’ಕೇಸರಿ’ಯ ನೆನಪಿಗಾಗಿ ಬರೆದುದು’ ಎಂಬ ಟಿಪ್ಪಣಿಯನ್ನೊಳಗೊಂಡಿದೆ.
ಎಲೆ ವೀರಕೇಸರಿಯೆ, ಮಲಗು ಮಲಗಿಲ್ಲಿ,
ಹಸುರಿಂದ ನಲಿಯುವೀ ನೆಲದಾಳದಲ್ಲಿ!
ನಿನ್ನ ಬಾಳಿನ ಪಯಣ ಪೂರೈಸಿತಿಂದು
ಇನ್ನು ವಿಶ್ರಾಂತಿಯೈ ಮುಂದೆ ನಿನಗೆಂದೂ!
ನಿನ್ನ ಗೋರಿಯ ತೋರಲಾವ ಗುರುತಿಲ್ಲ;
ನಿನ್ನ ಕೀರ್ತಿಯ ಸಾರೆ ಬಡ ಚೈತ್ಯವಿಲ್ಲ.
ಆದರೇನಾ ಪೂತ ಪೊದೆ ಸಹಜ ಚೈತ್ಯ;
ನಿನ್ನ ಕೀರ್ತಿಯ ಕಲ್ಲೆ ಶಾಶ್ವತವು ನಿತ್ಯ.
ತಿಳಿನೀಲ ಬಾಂದಳವು ಮೆರೆಯುವುದು ಮೇಲೆ;
ಮುಗಿಲು ಕೊಡೆ ಹಿಡಿಯುವುದು, ಮೋಡಗಳು ತೇಲೆ.
ಇನಿದನಿಯ ಬೀರುವುದು ಲಾವುಗೆಯು ಇಲ್ಲಿ;
ಚೀರುಲಿಯ ಕೋಗಿಲೆಯು ವನದಳಿರಿನಲ್ಲಿ.
ಪೂತ ಪೊದೆಯನ್ನೇ ನಿತ್ಯಸ್ಮಾರಕವಾಗಿಸಿ, ಕೊಡೆ ಹಿಡಿದ ಮುಗಿಲು, ಚೀರುಲಿಯ ಕೋಗಿಲೆ ಮೊದಲಾದವನ್ನು ಜೊತೆಗಿರಿಸಿ ಕೇಸರಿಗೆ ವಿದಾಯ ಹೇಳುತ್ತಾರೆ. ಕೊಳಲೂದುವ ಗೋಪಾಲಕರು ಮುಂದೆ ಕೇಸರಿಯ ಸಾಹಸವನ್ನು ಕಥೆಯಾಗಿಸಿ ಹೇಳುತ್ತಾರೆ, ಕೇಳುತ್ತಾರೆ ಎಂಬ ಆಶೆಯೂ ಕವಿಗಿದೆ.
ಬೇಸರಾಗದು ನಿನಗೆ: ಗೋಪಾಲರಿಲ್ಲಿ
ಕೊಳಲೂದಿ ನಲಿಯುವರು ಬಯಲ ಹಸುರಲ್ಲಿ.
ವರುಷಗಳ ಮೇಲವರು ನಿನ್ನ ಕತೆ ಹೇಳಿ
ನಿಟ್ಟುಸಿರು ಬಿಡುವರೈ ಕಿವಿಗೊಟ್ಟು ಕೇಳಿ.
ಎಲೆ ವೀರಕೇಸರಿಯೆ, ಮಲಗು ಮಲಗಿಲ್ಲಿ
ಹಸುರಿಂದ ನಲಯುವೀ ನೆಲದಾಳದಲ್ಲಿ!
ಯುದ್ಧದಲ್ಲಿ ಹೋರಾಡಿ ಮಡಿದ ವೀರನನ್ನು ಅಪ್ಸರೆಯರು ಬಂದು ಸ್ವರ್ಗಕ್ಕೇ ಕರೆದೊಯ್ಯುತ್ತಾರೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ವೀರಗಲ್ಲುಗಳನ್ನು ಅದೇ ರೀತಿ ಚಿತ್ರಿಸಿರುತ್ತಾರೆ. ಇಲ್ಲಿ ಕವಿಯು ಆ ಹಿನ್ನೆಲೆಯಲ್ಲಿ
ಘೋರ ಸೂಕರದೊಡನೆ ಮಡಿದೆ ಕಾದಾಡಿ;
ನಾಕದೊಳು ನಲಿವೆ ನೀ ವೀರರೊಡಗೂಡಿ
ಸುಖದಿಂದ ನಿದ್ರಿಸೈ ಗಲಭೆ ಇಲ್ಲಿಲ್ಲ;
ಇಲ್ಲಿ ಹೊಗಳುವವರಿಲ್ಲ, ನಿಂದಿಸುವವರಿಲ್ಲ.
ಮೇಲಾಟ ಹೋರಾಟವೆಂಬುವಿಲ್ಲಿಲ್ಲ,
ಸಿರಿಸುತರು ಬಡವರೆಂಬುವ ಭೇದವಿಲ್ಲ.
ಎಲೆ ವೀರಕೇಸರಿಯೆ, ಮಲಗು ಮಲಗಿಲ್ಲಿ
ಹಸುರಿಂದ ನಲಿಯುವೀ ನೆಲದಾಳದಲ್ಲಿ!
ಎಂದು ಹಾಡುತ್ತಾರೆ. ಘೋರ ಸೂಕರದೊಡನೆ ಮಡಿದೆ ಕಾದಾಡಿ ಎಂಬ ಸಾಲು ಹಂದಿಯೂ ಸತ್ತಿತು ಎಂಬುದನ್ನು ಸೂಚಿಸುತ್ತದೆ. ಸಾವಿನಲ್ಲಿ ಎಲ್ಲರೂ - ಮನುಷ್ಯ ಪ್ರಾಣಿ ಪಕ್ಷಿ ಗಿಡ ಮರಗಳೆಲ್ಲವೂ ಸಮಾನರು; ಅದಕ್ಕೆ ಬಡವ ಬಲ್ಲಿದ ಎಂಬ ಬೇದವಿಲ್ಲ! ಮುಂದುವರೆದು, ಅದರ ಮರ್ತ್ಯದ ಸಾಹಸದ ಹಿನ್ನೆಲೆಯನ್ನು ತಿಳಿಸುತ್ತಲೇ, ಈಗ ಅವಾವೂ ಸಾಧ್ಯವಿಲ್ಲ ಎನ್ನುತ್ತಾರೆ.
ಮುಂದೆ ನೀ ಜಿಂಕೆಗಳನೋಡಿಸುವುದಿಲ್ಲ;
ನೀನಿನ್ನು ಹುಲಿಗಳನು ಅಟ್ಟುವುದು ಇಲ್ಲ.
ನಿನ್ನ ಕೂಗಿಗೆ ಕಾಡು ಗಿರಿ ಗುಹೆಗಳೆಲ್ಲ
ಇನ್ನೆಂದು ಮಾರ್ದನಿಯ ಬೀರುವುದೆ ಇಲ್ಲ.
ಬೇಟೆಗಾರರ ಕೂಗ ನೀ ಕೇಳಲಾರೆ;
ಸಿಡಿದ ಗುಂಡಿನ ಸದ್ದನಾಲಿಸಲು ಆರೆ,
ನಿತ್ಯ ಮೌನತೆ ನಿನ್ನ ನುಂಗಿರುವುದೀಗ;
ನಿನ್ನ ಗಂಟಲಿಗಾಯ್ತು ಮಿರ‍್ತುವಿನ ಬೀಗ.
ಹೋಗುವೆವು ನಾವೆಲ್ಲ ಮನೆಗೆ; ಮಲಗಿಲ್ಲ
ಹೊಸ ಹಸುರಿನಿಂದೆಸೆಯುವೀ ಪಸಲೆಯಲ್ಲಿ!
ಆದರೆ, ನೀನು ಹಿಂದೆಯೂ ಇದ್ದೆ, ಮುಂದೆಯೂ ಇರುತ್ತೀಯ ಬೇರೆ ಬೇರೆ ರೂಪದಲ್ಲಿ. ನಿನಗೆ ಸನ್ಮಾನವೂ ಉಂಟು; ಗೌರವವೂ ಉಂಟು ಎಂದು ಹೇಳುತ್ತಾ ಕೇಸರಿಯಾತ್ಮಕ್ಕೆ ಮಂಗಳವೆನ್ನುತ್ತಾ ಕವಿತೆ ಮುಕ್ತಾಯವಾಗುತ್ತದೆ.
ಇಲ್ಲ; ನೀನಿಲ್ಲಿಲ್ಲ, ನಿತ್ಯ ಸಂಚಾರಿ!
ನಲಿಯುತಿಹೆ ಯಾರು ಕಾಣದ ಊರ ಸೇರಿ.
ಪೂರ್ವ ಜನ್ಮದೊಳಾವ ವೀರನೋ ನೀನು?
ಕರ್ಮದಿಂದೀ ಜನ್ಮವೆತ್ತಿದೆಯೊ ಏನು?
ಯಾರು ಬಲ್ಲರು ಎಲ್ಲಿ ಜನಿಸಿಹೆಯೊ ಈಗ?
ಮುದ್ದು ಕೇಸರಿಯೆ, ನೀ ಎಲ್ಲಿದ್ದರೇನು?
ಯಾವ ಲೋಕವ ಸೇರಿ ಎಂತಿದ್ದರೇನು?
ಗುಂಡುಗಳು ಹಾರುವುವು ಸನ್ಮಾನಕಾಗಿ!
ಜಯವೆನ್ನುವೆವು ನಿನ್ನ ಗೌರವಕೆ ಕೂಗಿ!
ಶಾಂತಿ ಸುಖಗಳು ಬರಲಿ, ವೀರಾತ್ಮ, ನಿನಗೆ!
ಮಂಗಳವೊ ಮಂಗಳವು, ಕೇಸರಿಯೆ, ನಿನಗೆ!

Monday, December 05, 2011

ಏಕಾಂಗಿ: ಆಗಿಹೆನು ನಿಜವಾಗಿ ಅದ್ವೈತಿ!

೧೯೨೪, ಜೂನ್ ೧೯ರಿಂದ ೨೨ರವರೆಗೆ ಊರಿನಲ್ಲಿದ್ದು, ಬೇಸಗೆ ರಜ ಮುಗಿಸಿಕೊಂಡು, ೨೩ರಂದು ಮೈಸೂರಿಗೆ ಬರುತ್ತಾರೆ. ತಮ್ಮ ಐಚ್ಛಿಕ ವಿಷಯಗಳು ಪಿ.ಸಿ.ಎಂ. ಆಗಿದ್ದರೂ ಕಾಲೇಜು ಕಲಿಕೆಗೆ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಹಾಗೂ ಕವಿಚೇತನಕ್ಕೆ ಹೆಚ್ಚು ಅಪೇಕ್ಷಣೀಯವೂ ಪ್ರಯೋಜಕರವೂ ಆಗುತ್ತದೆಂಬ ಕಾರಣಕ್ಕಾಗಿ ಆರ್ಟ್ಸ್ ವಿಭಾಗವನ್ನು ಆಯ್ದುಕೊಂಡು ಮಹಾರಾಜಾ ಕಾಲೇಜನ್ನು ಸೇರುತ್ತಾರೆ. ಅಲ್ಲಿಂದ ಆರು ದಿನಗಳ ನಂತರದ, ಜೂನ್ ೨೯ರ ದಿನಚರಿ ಹೀಗಿದೆ. "ನನ್ನ ತಾಯಿಗೆ ತುಂಬ ಖಾಯಿಲೆಯಾಗಿದೆ ಎಂದು ಡಿ.ಎನ್.ಹಿರಿಯಣ್ಣ ಕಾಗದ ಬರೆದಿದ್ದಾನೆ. ನನಗೇನೊ ಅಳುಕುಹುಟ್ಟಿ, ಮನಸ್ಸಿನಲ್ಲಿ ಭಯ ಸಂಚಾರವಾಯಿತು. (I felt it and my heart gave way to formless fears.) ಆದರೆ ಮತ್ತೆ ಮನಸ್ಸಿಗೆ ಸಮಾಧಾನ ತಂದುಕೊಂಡು, ನನ್ನ ತಾಯಿಯ ಕ್ಷೇಮವನ್ನು ನನ್ನ ಮಹಾಮಾತೆ ಜಗಜ್ಜನನಿಯ ಕೈಗೆ ಅರ್ಪಿಸಿದೆ. ಮತ್ತೆ ನನಗೆ ನಾನೆ ಅಂದುಕೊಂಡೆ: ನನ್ನ ತಾಯಿ ಸತ್ತರೂ ಅವರು ಬೇರೆಯ ಲೋಕದಲ್ಲಿ ಬದುಕಿಯೆ ಇರುತ್ತಾರೆ. ಓ ಸ್ವಾಮೀ, ನೀನು ನನಗೆ ತಂದೊಡ್ಡುವ ಕಷ್ಟಗಳನ್ನೆಲ್ಲ ಎದೆಗೆಡದೆ ಸಹಿಸುವಂತೆ ಧೈರ್ಯವನ್ನು ದಯಪಾಳಿಸು. ಸಮಸ್ತ ಜಗತ್ತನ್ನೂ ನೀನು ತಂದೆಯಂತೆ ಕಾಯುತ್ತಿರುವಲ್ಲಿ ನನ್ನ ಚೇತನ ಭಯಗಳಿಗೆ ತುತ್ತಾಗದಿರಲಿ. ಎಲೈ ಭಾರವೆ, ತೊಲಗಾಚೆ!" ಮಾರನೆಯ ದಿನದ ದಿನಚರಿಯಲ್ಲಿ "ಓ ತಾಯೀ, ನನ್ನ ಅವ್ವನ ಸಂರಕ್ಷಣೆ ನಿನಗೆ ಸೇರಿದ್ದು? ನಾನೇಕೆ ದುಃಖಿಸಲಿ?' ಎಂದು ತಾಯಿಯ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಈ ಎಲ್ಲಾ ಆತಂಕಗಳ ನಡುವೆಯೇ, 2.7.1924ರಂದು ಐರಿಸ್ ಕವಿ ಜೇಮ್ಸ್ ಎಚ್. ಕಸಿನ್ಸ್ ಅವರನ್ನು ಬೇಟಿ ಮಾಡುವುದು!

ಅಲ್ಲಿಗೆ ಸರಿಸುಮಾರು ಒಂದು ತಿಂಗಳಿಗೆ ಅವರ ತಾಯಿ ನಿಧನರಾಗುತ್ತಾರೆ. ಅದಕ್ಕೂ ಮೊದಲು, ಸುಮಾರು ೨೦ ವರ್ಷದ ಯುವಕ ಪುಟ್ಟಪ್ಪನಿಗೆ, ಸಾವಿನ ವಿಷಯದಲ್ಲಿ ಇದ್ದ ಮನೊಭಾವ, ಸ್ವಲ್ಪಮಟ್ಟಿನ ಆತಂಕ, ಬಹುಮಟ್ಟಿನ ನಿರ್ಲಿಪ್ತತೆ, ಉದಾಸೀನತೆ, ಆಧ್ಯಾತ್ಮಿಕ ಸಮರ್ಥನೆ ಇವೆಲ್ಲವೂ ಗಮನಾರ್ಹ. ಆ ಬೇಸಗೆ ರಜಕ್ಕೆ ಊರಿಗೆ ಹೋಗಿದ್ದರೂ, ಅಲ್ಲಿಯೂ ಸಾಹಿತ್ಯ, ಆಧ್ಯಾತ್ಮ, ಪ್ರಕೃತಿ, ಗೆಳೆಯರು ಇವುಗಳಲ್ಲಿ ಮುಳುಗಿಹೋಗುವ ಕವಿ ತನ್ನ ತಾಯಿ ಮತ್ತು ತಂಗಿಯರನ್ನು ಭೇಟಿಯಾಗುವುದೇ ಇಲ್ಲ. ಅವರು ಆಗ ಹಿರೆಕೂಡಿಗೆಯಲ್ಲಿ ಇದ್ದರು. ಅಲ್ಲಿಗೆ ಹೋಗಿ ಅವರನ್ನು ಕಂಡು ಮಾತನಾಡಿಸುವ ಕುಪ್ಪಳಿಗೆ ಕರೆತರುವ ಯಾವ ಕೆಲಸವನ್ನೂ 'ಕಿಶೋರಚಂದ್ರವಾಣಿ'ಯಾಗಿದ್ದ ಕವಿ ಪುಟ್ಟಪ್ಪ ಮಾಡುವುದೇ ಇಲ್ಲ. 'ಕುಪ್ಪಳಿ ರಾಮಣ್ಣಗೌಡರೊಂದಿಗಿನ ಮನಸ್ತಾಪವೇ ಕಾರಣವಾಗಿ ಅವರು ತವರು ಮನೆಗೆ ಮಕ್ಕಳೊಂದಿಗೆ ಹೋಗಿದ್ದಾರೆ' ಎಂಬ ಕಾರಣವೂ ಕವಿಗೆ ಗೊತ್ತಿತ್ತು! ಈ ಹಿಂದೆಯೇ ಸ್ವತಃ ರಾಮಣ್ಣಗೌಡರು, ಮೈಸೂರಿನಲ್ಲಿದ್ದ ಕವಿಗೆ ಕಾಗದ ಬರೆದು ಈ ವಿಷಯವನ್ನು ತಿಳಿಸಿದ್ದರು. ಆ ದಿನಗಳಲ್ಲಿ ಕವಿಯ ಸಮಸ್ತಚೇತನವನ್ನು ಒಂದು ಅಲೌಕಿಕತೆ ಆಕ್ರಮಿಸಿಕೊಂಡಿದ್ದರಿಂದ, ಹೋಗಿ ಅವರನ್ನು ಕಂಡು ವಿಚಾರಿಸಿ ವಿಷಯ ಏನೆಂದು ತಿಳಿಯುವ ಯಾವುದೇ ಗೋಜಿಗೆ ಹೋಗುವುದಿಲ್ಲ. ಮುಂದೆ ಅಲಿಗೆ ಪುಟ್ಟನಾಯ್ಕರು ಬರೆದಂತೆ, 'ಕುಪ್ಪಳಿಗೆ ಬಂದ ಮಗ, ಹಿರೆಕೂಡಿಗೆಗೆ ತಮ್ಮನ್ನು ನೋಡಲು ಬರಲಿಲ್ಲ' ಎಂಬುದನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದರಂತೆ. ಆಗಿನ ತಮ್ಮ ಆಧ್ಯಾತ್ಮಿಕ ಅಲೌಕಿಕ ಮನಸ್ಥಿತಿಯ ಬಗ್ಗೆ ಕವಿ 'ಅರ್ಧ ವಿವೇಕ ಅರ್ಧ ಅವಿವೇಕಗಳಲ್ಲಿ ನನ್ನ ಪ್ರಜ್ಞೆ ಅರ್ಧಮೂರ್ಛಿತ ಸ್ಥಿತಿಯಲ್ಲಿ ಮುಂದುವರಿಯುತ್ತಿತ್ತೆಂದು ಭಾಸವಾಗುತ್ತದೆ' ಎನ್ನುತ್ತಾರೆ.

ತಾಯಿಯ ಕಾಯಿಲೆ ವಿಷಯ ತಿಳಿದಾಗ, ಊರಿಗೆ ಹೋಗಬೇಕೆನ್ನುವ ಯಾವ ಪ್ರಯತ್ನವನ್ನೂ ಅವರು ಮಾಡುವುದಿಲ್ಲ. ಮಲೆನಾಡಿನಲ್ಲಿ ಆಗ ಕಾಯಿಲೆ ಬೀಳುವುದು ಸಮಾನ್ಯ ವಿಷಯವಾಗಿದ್ದರಿಂದ, ಹಾಗೂ 'ಕಾಯಿಲೆ ಬಿದ್ದ ಮಾತ್ರಕ್ಕೆ ಅವ್ವ ಸತ್ತೇ ಹೋಗುತ್ತದೆ' ಎಂದು ಎಣಿಸದಿದ್ದುರಿಂದ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮತ್ತೆ ಸ್ಥಾವರಪ್ರಕೃತಿಯೇ ಹುಟ್ಟುಗುಣವಾಗಿದ್ದ ಅವರಿಗೆ, ಊರಿನಿಂದ ಬಂದ ಒಂದು ವಾರದೊಳಗಾಗಿಯೇ ಮತ್ತೆ ಊರಿಗೆ ಹೋಗುವ ಮನಸ್ಸು ಹೇಗೆ ಬಂದೀತು? ಅಲ್ಲಿಂದ ಮುಂದೆ ಹದಿನೈದು ದಿನಗಳಲ್ಲಿ ಅವರ ಅಜ್ಜ ಬಸಪ್ಪಗೌಡರು ತೀರಿಕೊಂಡರು. ಆಗಲೂ ಊರಿಗೆ ಹೋಗಲಿಲ್ಲ. ಆಗ ಹೋಗಿದ್ದರೆ, ತನ್ನ ತಾಯಿ ಸಾಯುವ ಮೊದಲೊಮ್ಮೆ ಅವರನ್ನು ನೋಡುವ ಅವಕಾಶ ಕವಿಗಿರುತ್ತಿತ್ತು. ಏಕೆಂದರೆ, ಅಜ್ಜಯ್ಯ ತೀರಿಕೊಂಡ ಹದಿನೈದೇ ದಿನದಲ್ಲಿ ತಾಯಿಯೂ ತೀರಿಕೊಂಡಿದ್ದರು!

ತಾಯಿಯ ನಿಧನದ ವಾರ್ತೆಯನ್ನು ಹೊತ್ತ ಟೆಲಿಗ್ರಾಂ ಬಂದಾಗ ಸಂತೇಪೇಟೆಯ ಆನಂದಮಂದಿರ ಹೋಟೆಲಿನ ಉಪ್ಪರಿಗೆಯ ಕೊಠಡಿಯಲ್ಲಿ ಸಹವಾಸಿಗಳೊಡನೆ ಇಸ್ಪೀಟು ಆಡುತ್ತಾ ಕುಳಿತಿದ್ದರು. ಆಗಿನ ಅವರ ವರ್ತನೆಯನ್ನು ಅವರ ಮಾತುಗಳಲ್ಲಿಯೇ ನೋಡಬಹುದು. "ಯಾವುದು ಆದರೇನು ಗತಿ ಎಂದು ಭೀತನಾಗಿದ್ದೆನೋ ಅದು ನಡೆದುಹೋಗಿತ್ತು. ಯಾರ ಸ್ತನ್ಯಪಾನ ಲಾಲನೆ ಪಾಲನೆಗಳಿಂದ ನಾನೂ ಒಬ್ಬ ಮಾನವ ವ್ಯಕ್ತಿಯಾಗಿ ಬೆಳೆದುಬಂದಿದ್ದೆನೋ ಆ ಬ್ರಹ್ಮಮಯೀ ಮಾತೆ ದೇಹತ್ಯಾಗ ಮಾಡಿದ್ದರು! ಶೋಕಾಘಾತದಿಂದ ಚೇತನ ತತ್ತರಿಸಿತು, ಒಂದು ಕ್ಷಣ! ಒಡನೆಯೆ ನನ್ನ ಅದ್ವೈತಬುದ್ಧಿಯ ಅನೆಸ್ತೀಶಿಯಾ ಕೆಲಸ ಮಾಡಿತು. ಟೆಲಿಗ್ರಾಂ ಅನ್ನು ಜೇಬಿನಲ್ಲಿಟ್ಟುಕೊಂಡು, ಏನು ಎಂತು ಎಂದು ಪ್ರಶ್ನಿಸಿದ ಮಿತ್ರರಿಗೆ ಏನೂ ವಿಶೇಷದ್ದಲ್ಲ ಎಂಬಂತೆ ಉತ್ತರಿಸಿ, ಮತ್ತೆ ಆಟದಲ್ಲಿ ತೊಡಗಿದೆ. ಏನೂ ನಡೆದಿಲ್ಲ ಎಂಬಂತೆ ಆಟ ಮುಂದುವರಿದು ಬಹಳ ಹೊತ್ತಿನ ಮೇಲೆ ಮುಗಿಯಿತು."

ಆಟ ಮುಗಿದ ಮೇಲೆ, ವಿಷಯ ತಿಳಿದ ಗೆಳೆಯರು ದಿಗ್ಭ್ರಾಂತರಾದರು. ತಾಯಿಯ ಸಾವನ್ನು ಕೇಳಿ ದುಃಖಿಸಲಿಲ್ಲ! ಅಳಲಿಲ್ಲ, ಮುಖಭಾವದಲ್ಲಿ ವ್ಯಸನ ಸೂಚಿಸಲೂ ಇಲ್ಲ. 'ಇವನೇನು ಮನುಷ್ಯನೋ ಕಲ್ಲೋ' ಎನ್ನಿಸಿರಬೇಕು ಅವರಿಗೆ. ಬೆಳಿಗ್ಗೆ, ಇವರು ಊರಿಗೆ ಹೊರಡಬಹುದು ಎಂದು ನೋಡುತ್ತಿದ್ದ ಅವರಿಗೆ, ಕಾಲೇಜಿಗೆ ಹೊರಡಲು ಸಿದ್ಧರಾಗುತ್ತಿದ್ದ ಇವರನ್ನು ಕಂಡು ಗಾಬರಿಯೂ ಆಯಿತು. ಎಲ್ಲರೂ ಸರ್ವಸಮ್ಮತಿಯಿಂದ ಇವರ ನಿರ್ಧಾರವನ್ನು ವಿರೋಧಿಸಿದರು. 'ಆಗುವುದೆಲ್ಲ ಆಗಿಹೋಗಿರುತ್ತದೆ; ನಾನು ಹೋಗಿ ಏನು ಪ್ರಯೋಜನ?' ಎಂದರು. ಆಗ ಗೆಳೆಯರು ಸತ್ತವರಿಗಾಗಿ ಬೇಡ, ನಿಮ್ಮ ತಂಗಿಯರನ್ನಾದರೂ ಸಂತೈಸಲು ಹೋಗಿ ಬನ್ನಿ' ಎಂದರು. 'ಕೂಡುಕುಟುಂಬದ ನಡುವೆ ಬೆಳೆಯುತ್ತಿರುವ ಅವರಿಗೆ ಅದರ ಅಗತ್ಯವಿಲ್ಲ' ಅನ್ನಿಸಿಬಿಡುತ್ತದೆ ಈ ಅದ್ವೈತಿಗೆ! ಒಟ್ಟು ಘಟನೆಯ ಬಗ್ಗೆ ನೆನಪಿನ ದೋಣಿಯಲ್ಲಿ ಹೀಗೆ ಬರೆಯುತ್ತಾರೆ. "ನನ್ನ ತಾಯಿ ಸತ್ತಿಲ್ಲವೆಂದೇ ನನ್ನ ದೃಢ ನಂಬುಗೆಯಾಗಿತ್ತು, ಅವರ ದೇಹ ಭಸ್ಮೀಭೂತವಾಗಿದ್ದರೂ ಅವರಾತ್ಮ ಅಮೃತವಾಗಿ ನನ್ನ ತಂದೆಯ ಆತ್ಮದೊಡನೆ ಇರುತ್ತಾ ಮಕ್ಕಳ ಕ್ಷೇಮಕ್ಕಾಗಿ ಆ ಲೋಕದಿಂದ ಮಾಡಬಹುದಾದುದನ್ನು ಮಾಡುತ್ತಿರುತ್ತದೆ ಎಂದು."

ಒಂದು ವಿಷಯದಲ್ಲಿ ಅವರ ಸ್ನೇಹಿತರು ಯಶಸ್ವಿಯಾಗುತ್ತಾರೆ. ಊರಿನಿಂದ, 'ಹನ್ನೊಂದನೇ ದಿನದ ಕಟ್ಟಳೆಗಾದರೂ, ಹಿರಿಯ, ಒಬ್ಬನೆ ಗಂಡುಮಗನಾದ ನೀನು ಬರಲೇಬೇಕು' ಎಂದು ಕಾಗದ ಬಂದಿರುತ್ತದೆ. ಆದರೆ ತಿಥಿ ಮುಂತಾದ ಅಪರಕರ್ಮಗಳಲ್ಲಿ ಒಂದಿನಿತೂ ನಂಬಿಕೆಯಿಲ್ಲದ ಇವರು ಅದನ್ನೂ ವಿರೋಧಿಸುತ್ತಾರೆ. ಗೆಳೆಯರ ಒತ್ತಾಯದ ನಡುವೆ ಒಂದೆರಡು ದಿನಗಳು ಒದ್ದಾಡಿ, ಕೊನೆಗೂ ಊರಿಗೆ ಹೋಗಿಬರಲು ಸಮ್ಮತಿಸುತ್ತಾರೆ.

ದಹನ ಸಂಸ್ಕಾರಾದಿಗಳೆಲ್ಲಾ ಮುಗಿದು, ಹನ್ನೊಂದನೇ ದಿನದ ಕ್ರಿಯೆಗೆ ಸಿದ್ಧವಾಗುತ್ತಿದ್ದ ಮನೆಯಲ್ಲಿ ಇವರ ಪ್ರಕಾರ ಇವರು ಮಾಡಬೇಕಾಗಿದ್ದ ಕೆಲಸಗಳಾವು ಇರಲಿಲ್ಲ. ಆದರೆ, ತಾಯಿಯ ಸಾವಿನಿಂದ ತತ್ತರಿಸಿ, ಅಣ್ಣನ ಬರುವಿಕೆಗಾಗಿ ಕಾದು ಕುಳಿತಿದ್ದ ತಂಗಿಯರಿಬ್ಬರು ಎದುರಿಗೆ ಬಂದಾಗ ಇವರು ನಡೆದುಕೊಂಡ ರೀತಿ ಮಾತ್ರ ಅವರು ನಿರೀಕ್ಷಿಸಿದಂತೆ ಇರಲಿಲ್ಲ. ಒಟ್ಟು ಕುಟುಂಬದಲ್ಲಿ ಹುಟ್ಟಿ ಬೆಳೆದು, ಎಂದೂ ಏಕಾಂತದಲ್ಲಿ ಕಾಲಕಳೆಯದ, ಅಣ್ಣನೊಂದಿಗೆ ಮಾತನಾಡದ ತಂಗಿಯರು, ತಾಯಿಯ ಸಾವಿನ ಸಮಯದಲ್ಲೂ ಅಣ್ಣ ಎದುರಾದಾಗ ಮಾತನಾಡುವುದಿಲ್ಲ; ಆದರೆ ದುಃಖಿಸುತ್ತಾರೆ. ಆಗ ಇವರು ಅವರನ್ನು ಗದರಿಸಿ ಸುಮ್ಮನಾಗಿಸುತ್ತಾರೆ! ಆ ಘಟನೆಯನ್ನು ಕುರಿತು ಹೀಗೆ ಹೇಳುತ್ತಾರೆ. "ಅದನ್ನು ನೆನೆದರೆ ನನಗೆ ಈಗಲೂ ನಾಚಿಕೆಯಾಗುತ್ತದೆ; ನನ್ನ ಮೇಲೆ ತುಂಬ ಸಿಟ್ಟು ಬರುತ್ತದೆ; ಎಂತಹ ವ್ಯವಹಾರಜ್ಞಾನ ಲವಲೇಶವೂ ಇಲ್ಲದ ಅವಿವೇಖಿಯಾಗಿದ್ದೆ ಎನ್ನಿಸುತ್ತದೆ; ಎಷ್ಟು ನೊಂದುಕೊಂಡುವೊ ಆ ತಂಗಿಯರಿಬ್ಬರ ಕೋಮಲ ಹೃದಯಗಳು - ತಾಯಿಯ ಸಾವಿನ ದುಃಖದಲ್ಲಿ ಬೆಂದು, ಅಣ್ಣನ ಸಹಾನುಭೂತಿಗೂ ಅನುಕಂಪಕ್ಕೂ ಅಕ್ಕರೆಗೂ ಹಾತೊರೆಯುತ್ತಿದ್ದ ಆ ಸುಮಕೋಮಲ ಹೃದಯಗಳು -  ಎಂದು ಹೃದಯ ಮಮ್ಮಲ ಮರುಗುವಂತಾಗುತ್ತದೆ." ಅತ್ತ ಮನೆಯೊಳಗೆ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದ್ದರೆ, ಇತ್ತ ಇವರು ಆಸಕ್ತರೊಂದಿಗೆ, ಭಗವದ್ಗೀತೆ, ಉಪನಿಷತ್ತು, ಅಂದಿನ ರಾಜಕೀಯ ಸ್ಥಿತಿಗತಿ, ಗಾಂಧಿ ವಿಷಯ, ಕಾವ್ಯಗಳ ಸ್ವಾರಸ್ಯ ಕುರಿತು ಮಾತನಾಡುತ್ತಾ ಕಾಲಕಳೆಯುತ್ತಿದ್ದರಂತೆ, ಉಪ್ಪರಿಗೆಯಲ್ಲಿ!

ಸಾಮಾನ್ಯವಾಗಿ ತಾಯಿಯ ತಿಥಿಕರ್ಮದಲ್ಲಿ ಮಗ ಮಾಡಬಹುದಾದ ಕಾರ್ಯಗಳನ್ನು ಮಾಡಲೂ ಮನಸ್ಸು ಮಾಡಲಿಲ್ಲ. ಆದರೆ ಮನೆಯವರ ಸ್ನೇಹಿತರ ಒತ್ತಾಯಕ್ಕೆ ಮಣಿದು, ದಹನ ನಡೆದ ಸ್ಥಳಕ್ಕೆ ಹೋಗಿ ಹಾಲು ಎರೆಯುತ್ತಾರೆ. ಆದರೆ ಪುರೋಹಿತ ಹೇಳಿಕೊಡುತ್ತಿದ್ದ ಮಾತುಗಳನ್ನು ಹೇಳದೆ, ಬಾಯಿಗೆ ಬರುತ್ತಿದ್ದ ಉಪನಿಷತ್ತಿನ ಮಂತ್ರಗಳನ್ನು, ಭಗವದ್ಗೀತೆಯ ಅಮೃತತ್ವ ಪ್ರತಿಪಾದನೆಯ ಮಹಾಶ್ಲೋಕಗಳನ್ನು ಹೇಳಿ ತಾಯಿಗೆ ನಮಿಸುತ್ತಾರೆ. ಅಂದು ರಾತ್ರಿ, ಈ ಹಿಂದೆಯೇ ಸತ್ತವರ ಆತ್ಮಗಳ ಪಂಕ್ತಿಗೆ, ಈಗ ಸತ್ತಿರುವವರ ಆತ್ಮವನ್ನು ಸೇರಿಸುವ 'ಕೊಲೆಗಿಡುವುದು' ಎಂಬ ಕಾರ್ಯಕ್ರಮವನ್ನು ತೀವ್ರವಾಗಿ ವಿರೋಧಿಸುತ್ತಾರೆ. ಮಲೆನಾಡಿನವರ ಪದ್ಧತಿಯಂತೆ, ಎಡೆಯಲ್ಲಿ ಹೆಂಡ ಮಾಂಸ ಮೊದಲಾದ ವಸ್ತುಗಳನ್ನೆಲ್ಲಾ ಇಟ್ಟು, ಹಿರಿಯ ಮಗನೆ ಮೊದಲ್ಗೊಂಡು ಎಲ್ಲರೂ ಪೂಜಿಸಿ ಅಡ್ಡ ಬೀಳುವುದೇ ಆ ಕಾರ್ಯಕ್ರಮ. ಅದರ ನಂತರವೇ ಬಂದವರಿಗೆ ಊಟ. ಮನೆಯವರ ಸ್ನೇಹಿತರ ಒತ್ತಾಯಕ್ಕೆ ಮಣಿದ ಕವಿ, ಎಡೆಯಲ್ಲಿಟ್ಟಿದ್ದ ವಸ್ತುಗಳನ್ನೆಲ್ಲ ತೆಗೆಸಿ ಭಗವದ್ಗೀತೆ ಮತ್ತು ವಿವೇಕಾನಂದರದ್ದೋ ಅಥವಾ ರಾಮಕೃಷ್ಣರದ್ದೋ ಚಿತ್ರಪಟವನ್ನಿಟ್ಟು ಹೂವು ಮಡಿಸಿ, ಮಾತೆಗೆ ಶಾಂತಿ ಕೋರಿ ನಮಿಸುತ್ತಾರೆ! 'ತನ್ನ ತಾಯಿ ಪ್ರೇತವಾಗಿ ಬರುತ್ತಾರೆ' ಎಂಬ ಭಾವನೆಯೇ ಅವಗರಿಗೆ ಅಸಹ್ಯಕರವಾಗಿತ್ತು. 'ಉತ್ತಮ ಲೋಕಗಳಲ್ಲಿ ಅವರ ಪಯಣ ಮಂಗಳಕರವಾಗಿ, ಅವರು ಜಗನ್ಮಾತೆಯ ಮಡಿಲನ್ನು ಸೇರಲಿ ಎಂದು ಹೃತ್ಪೂರ್ವಕವಾಗಿ ಪ್ರಾರ್ಥಿಸುವುದೊಂದೇ ತಾನು ಮಾಡಬಹುದಾದ್ದುದು' ಎಂಬ ನಂಬುಗೆ ಅವರದ್ದಾಗಿತ್ತು. ಮೇಲಿನ ಕ್ರಿಯೆಗಳಲ್ಲಿ ಒಂದು ವಿಷಯ ಮಾತ್ರ ಕವಿಯ ಭಾವಕೋಶವನ್ನು ಭಾವಮಯವನ್ನಾಗಿ ಮಾಡಿಬಿಡುತ್ತದೆ. ಸುಡುಗಾಡಿನಲ್ಲಿ, ಏಳೆಂಟು ವರ್ಷಗಳ ಹಿಂದೆ ತಮ್ಮ ತಂದೆಯ ಅಂತ್ಯಸಂಸ್ಕಾರ ನಡೆದ ಜಾಗದಲ್ಲಿಯೇ ತಾಯಿಯ ಅಂತ್ಯಸಂಸ್ಕಾರ ನಡೆದಿದ್ದ ಸಂಗತಿ ತಿಳಿದ ಕವಿ ಅಂತರ್ಮುಖಿಯಾಗುತ್ತಾರೆ.

ತಾಯಿಯ ಮರಣದಿಂದ ತೊಳಲಾಡಿದ ಕವಿಯ ಮೇಲಿನ ಮನಸ್ಥಿತಿಯೆಲ್ಲಾ, ಆಮೇಲೆ, ಅಂದರೆ ಸುಮಾರು ನಲವತ್ತು ವರ್ಷಗಳ ನಂತರದಲ್ಲಿ ದಾಖಲಾಗಿರುವುದು. ಆದರೆ ಆಗಿನ ಅವರ ಮನಸ್ಥಿತಿಯನ್ನು ಅರಿಯಲು ಸಹಾಯಕವಾಗುವಂತಹ ಒಂದು ಅಪ್ರಕಟಿತ ಕವಿತೆಯಿದೆ. ೨೧.೮.೧೯೨೪ರಂದು, ಅಂದರೆ ತಾಯಿಯ ಮರಣದ ಸುಮಾರು ಇಪ್ಪತ್ತು ದಿನಗಳ ನಂತರದಲ್ಲಿ ರಚಿತವಾಗಿರುವ 'ಅನಾಥ ಬಾಲ' ಶಿರ್ಷಿಕೆಯ ಈ ಕವಿತೆಗೆ, 'ನನ್ನ ಜನನಿಯ ಮರಣವಾರ‍್ತೆಯನ್ನು ಕೇಳಿ ಬರೆದುದು' ಎಂಬ ಟಿಪ್ಪಣಿಯೂ ಹಸ್ತಪ್ರತಿಯಲ್ಲಿದೆ. ೧ ೨ ೪ ೫ನೇ ಸಾಲುಗಳಲ್ಲಿ ಐದೈದು ಮಾತ್ರೆಯ ಎರಡೆರಡು ಗಣಗಳು ಹಾಗೂ ೩ ಮತ್ತು ೬ನೆಯ ಸಾಲುಗಳಲ್ಲಿ ಐದೈದು ಮಾತ್ರೆಯ ಮೂರು ಗಣಗಳು ಮತ್ತು ಕೊನೆಯಲ್ಲಿ ಒಂದು ಗುರು ಬರುವ, ಆದಿಪ್ರಾಸದಿಂದ ಕೂಡಿರುವ 'ಕುಸುಮ ಷಟ್ಪದಿ'ಯ ಲಯದಲ್ಲಿರುವ ಕವನ ಇದಾಗಿದೆ. ಹತ್ತು ಪದ್ಯಗಳಿವೆ. ತನ್ನ ತಾಯಿ ಸತ್ತಿಲ್ಲ; ಬೀಸುವ ಗಾಳಿಯಾಗಿ ಗಗನದಲ್ಲಿ, ಗಿರಿಗಳಲ್ಲಿ, ಕಾಡಿನಲ್ಲಿ, ಜೇನ್ದನಿಯಲ್ಲಿ, ಸಂಪಗೆಯ ಮರದಲ್ಲಿ... ಹೀಗೆ ಎಲ್ಲೆಲ್ಲಿಯೂ ಇದ್ದುಕೊಂಡು, ಹೆದರಬೇಡ ನಾನಿದ್ದೇನೆ ಎಂಬ ಅಭಯವನ್ನು ಮಗನಿಗೆ ಕೊಡುತ್ತಾ ಮುದ್ದಾಡುತ್ತಿದ್ದಾಳೆ ಎಂಬ ಭಾವವಿದೆ, ಕವಿತೆಯಲ್ಲಿ. ಕೆಲವು ಪದ್ಯಗಳನ್ನಿಲ್ಲಿ ಗಮನಿಸಬಹುದಾಗಿದೆ.
ಎಲೆ ಜನನಿ, ಎಲ್ಲಿರುವೆ?
ಬಿಳಿದಾದ ಮಲ್ಲಿಗೆಯು
ಪೊಳೆಯುತಿಹ ಮರದಲ್ಲಿ ನಗೆ ಬೀರುತ
ಅಲರ ರೂಪವ ತಾಳಿ
ತಳಿರ ಸೊಬಗನು ಹೊಂದಿ
ಇಳೆಯ ನಾಕದೊಳು ನೀಂ ನೆಲೆಸಿರ್ಪೆಯಾ?
ಗಗನದೊಳು ತೇಲುತಿಹ
ಮುಗಿಲಾಗಿ ನೀ ಬಂದು
ಮಗುವಾದ ನನ್ನ ನೀಂ ಮುದ್ದಿಸುವೆಯಾ?
ಹಗರಣವ ಮಾಡದಾಂ
ಹಗಲೆಲ್ಲ ಅಳುತಿರಲು
ಮಗುವೆ ಬಾ ಎಂದು ನೀ ಚುಂಬಿಸುವೆಯಾ?
ಸೊಂಪಾಗಿ ಬೆಳೆದಿರುವ
ಸಂಪಗೆಯ ಮರದಲ್ಲಿ
ಇಂಪಾಗಿ ಗಾನವಂ ನೀ ಹಾಡುವೆ
ತಂಪಾದ ಸಂಜೆಯೊಳು
ಸೊಂಪಾದ ತೋಟದೊಳು
ಇಂಪಾದ ಗಾನದಿಂ ನೀ ಕರೆಯುವೆ!
ಉನ್ನತಾದ್ರಿಯನೇರಿ
ಮುನ್ನಿನಾ ದಿನಗಳನು
ಚಿನ್ತಿಸುತ, ಜನನಿಯೇ, ಕುಳಿತಿರಲು ನಾ
'ಇನ್ನೇಕೆ ಅಳುತಿರುವೆ
ನಿನ್ನಲ್ಲಿ ನಾನಿಹೆನು!'
ಎನ್ನುತೈತಂದು ನೀಂ ಸಂತೈಸುವೆ!
ಮುಗಿಲ ಛೇದಿಸಿ ಬರುವ
ಗಗನ ಕಿರಣದಿ ಬಂದು
'ಮಗುವೆ, ನಾನಿಹೆನು ನೀ ಬೆದರಬೇಡೈ!
ನಗುತ ನೀ ನಲಿದಾಡು
ಖಗಪತಿ ಗಮನನಿಹನು,
ಮಗುವೆ.' ಎಂದೆನುತ ನೀ ಮುದ್ದಾಡುವೆ!
ಮೇಲಿನ ಕವಿತೆ ರಚನೆಯಾಗಿರುವ ಮಾರನೆಯ ದಿನವೇ (೨೨.೮.೧೯೨೪) ರಚಿತವಾಗಿರುವ ಇನ್ನೊಂದು ಕವಿತೆಗೆ ಶೀರ್ಷಿಕೆಯಿಲ್ಲ; ಪ್ರಕಟವೂ ಆಗಿಲ್ಲ. ಅಲ್ಲಿರುವ ಎರಡು ಪದ್ಯಗಳೂ ತಾಯಿಯನ್ನು ಸಂಬೋಧಿಸಿಯೆ ಪ್ರಾರಂಭವಾಗುತ್ತವೆ. ಆ ಸಂಬೋಧನೆ ಹೆತ್ತ ತಾಯಿಗೋ ಅಥವಾ ಜಗಜ್ಜನನಿಗೋ ಎಂಬುದು ಸ್ಪಷ್ಟವಾಗುವುದಿಲ್ಲ. ಹೆತ್ತಮ್ಮ ಮತ್ತು ಜಗದಮ್ಮರಿಗೆ ಅಭೇದ ಕಲ್ಪಿಸಿದ ಅದ್ವೈತ ಪರಿಣಾಮದ್ದು ಎಂದು ಭಾವಿಸಿದರೆ ಕವಿತೆಯ ಮಹತ್ವ ಹೆಚ್ಚಾಗುತ್ತದೆ.

ತಾಯಿ ನಿಧನರಾಗಿ ಏಳು ವರ್ಷಗಳಾದ ಮೇಲೆ, ಆಶ್ರಮದಲ್ಲಿ ನೆಲೆನಿಂತು ಐದುವರ್ಷಗಳಾದ ಮೇಲೆ, ಕೆಲಸಕ್ಕೆ ಸೇರಿ ಎರಡು ವರ್ಷಗಳಾದ ಮೇಲೆ... ಅಂದರೆ ೧೯೩೧ರಲ್ಲಿ ಒಂದು ದಿನ (೩೦.೧೦.೧೯೩೧) ಸಂಜೆ ಕುಕ್ಕರಹಳ್ಳಿ ಕೆರೆಯ ಅಂಚಿನ ಹಸುರಿನ ಮೇಲೆ ಏಕಾಂಗಿಯಾಗಿ ಕುಳಿತಿದ್ದಾಗ, ತಂದೆ ತಾಯಿ ತಂಗಿಯರ ನೆನಪು ಒತ್ತರಿಸಿ ಬರುತ್ತದೆ. ಹಿಂದಿನದನ್ನೆಲ್ಲ ನೆನೆದು ಕಣ್ಣೀರು ಕರೆಯುತ್ತಾರೆ. ಕಣ್ಣೀರಿನ ಜೊತೆ ಅವರೆಲ್ಲರಿಗೂ ಕಾವ್ಯಾಂಜಲಿಯನ್ನೂ ಸಲ್ಲಿಸಿಬಿಡುತ್ತಾರೆ. ಆಗ ರಚಿತವಾದ ಕವಿತೆಯೇ ಜನನಿಗೆ ಎಂಬುದು.
ಜನನಿಗೆ
ಜನನಿಯೇ, ವರುಷವೇಳರ ಹಿಂದೆ ನೀನಗಲಿ
ಹೋದೆ; ಕಣ್ಮರೆಯಾದೆ. ನಾನಂದು ಸುರಿಯದಾ
ಕಂಬನಿಗಳೆಲ್ಲವೂ ಹಿರಿಯ ಹೊಳೆಯಾಗಿಂದು
ನನ್ನೆದೆಯ ನೊಂದ ದಡಗಳ ಕೊಚ್ಚಿ ಹರಿಯುತಿದೆ.
ನೀನು ಮಡಿದಂದು ನಾನದ್ವೈತ ದರ್ಶನದ
ಮದಿರೆಯಲಿ ಮುಳುಗಿದ್ದೆ: ನನ್ನ ಕಿರುಬಾಳಿನಲಿ
ನನ್ನದಲ್ಲದ ಹಿರಿಯ ಶಕ್ತಿಯೊಂದಿರುತ್ತಿತ್ತು.
ವಿಶ್ವವೆಲ್ಲವು ಮಾಯೆ; ಜೀವರೆಂಬುವರೆಲ್ಲ
ಸುಳ್ಳಿನಲಿ ಕೆತ್ತಿರುವ ಗುಳ್ಳೆಗಳು; ಶಿವ ನಾನು;
ಎಂಬ ತತ್ತ್ವದ ಮತ್ತಿನಲಿ ನೀನು, ಯಾರೆದೆಯ
ಹಾಲುಂಡು ಬದುಕಿದೆನೊ ಆ ನೀನು, ಮಡಿದುದನು
ಸುಳ್ಳೆಂದು ಬಗೆದೆ. ನನ್ನ ತಂಗಿಯರು ಬಂದು
ನನ್ನೆದುರು ನಿಂತು ಕಂಬನಿಗರೆದು ಗೋಳಿಡಲು
ಅವರನಾಲಿಂಗಿಸುತೆ ಸಂತಸವಿಡುವುದನುಳಿದು
ಗದರಿದೆನು, ಕರುಣೆಯಿಲ್ಲದ ಕಠಿಣವಾಣಿಯಲಿ.
ಶಿವ ಶಿವಾ, ಅವರಿರ್ವರೂ ನನ್ನ ಬೆನ್ನುಗಡೆ
ಬಂದು ನನ್ನಯ ಕಣ್ಣ ಮುಂಗಡೆಯೆ ತೆರಳಿದರು!
ನಿಡುಸುಯ್ದು ಪ್ರಾರ್ಥಿಸಿದೆ; ಕಂಬನಿಗೆರೆಯಲಿಲ್ಲ.
ಆದರಿಂದೆ ನಾಂ ಜಗದ ರಂಗದಲಿ ಏಕಾಂಗಿ:
ತಂದೆ ತಾಯಿಗಳಿಲ್ಲ; ಅಣ್ಣನಿರಲೇ ಇಲ್ಲ;
ಇದ್ದ ತಂಗಿಯರಿಲ್ಲ: ಸಾಧು ಸಂಗದೊಳಿಂದು
ಏಕಾಂಗಿ: ಆಗಿಹೆನು ನಿಜವಾಗಿ ಅದ್ವೈತಿ!
ಇಂದು ಈ ಬೈಗಿನಲಿ, ಈ ಬಯಲು ಹಸುರಿನಲಿ,
ಹುಟ್ಟಿದೂರಿಗೆ ದೂರದೀ ರಾಜಧಾನಿಯಲಿ,
ನೀರವದ ನಿರ್ಜನದ ಗಂಭೀರ ಶಾಂತಿಯಲಿ,
ಚಿತ್ತದಲಿ ಮರಳಿ ಮೂಡಿದ ಕಳೆದ ಕಾಲದಾ
ಚಿತ್ರಭಿತ್ತಿಯಲಿ ಹೊಳೆಹೊಳೆದು ಮೈದೋರುತಿದೆ
ಮತ್ತೆ ನಿನ್ನಾ ಮೂರ್ತಿ! ಮೊಗದಲ್ಲಿ ಮುಗುಳುನಗೆ;
ಕಣ್ಗಳಲಿ ಚಿರಶಾಂತಿ; ಕೈಯೆತ್ತಿ ಹರಸುತಿಹೆ
ನಿನ್ನ ಮುದ್ದಿನ ಶಿಶುವ; ಹರಸು ಓ ಹರಸಮ್ಮಾ,
ನೀನೆನಗೆ ಶೂಭದ ಆಶೀರ್ವಾದ ಮೂರ್ತಿಯೌ:
ನಿನ್ನಡಿಗೆ ಇದೊ ಮಣಿದು ಬೀಳುವೆನು! ನನ್ನೊಳಿಹ
ಶಕ್ತಿಯುಕ್ತಿಗಳೆಲ್ಲ ನಿನ್ನ ಪದತೀರ್ಥದಲಿ
ಭಕ್ತಿ ಬಿಂದುಗಳಾಗಿ ಸಂಗಮಿಸಲಿ!